ತಲೆ ತಲಾಂತರದಿಂದ ವರದಕ್ಷಿಣೆ ಪಿಡುಗು ಇಲ್ಲದ ಸಮಾಜದ ಖ್ಯಾತಿ| ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದಲ್ಲಿ ವಧು ಕೊರತೆ | ಅನ್ಯ ಜಾತಿ ಯುವತಿಯರನ್ನು ಹುಡುಕುವ ಅನಿವಾರ್ಯತೆ ?

ಅನೀಲ ಬಸೂದೆ✍️

ಬೆಂಗಳೂರು: ತಲೆ ತಲಾಂತರದಿಂದ ವರದಕ್ಷಿಣೆ ಇಲ್ಲದೇ ಮದುವೆ ಆಗುವ ಸಮಾಜ ಎಂದರೆ, ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜ ಎಂದು ಇತರರಿಗೆ ಆದರ್ಶವಾಗಿರುವ ಸಮಾಜದಲ್ಲೀಗ ಯುವಕರ ಮದುವೆಯೇ ಪಾಲಕರಿಗೆ ಸವಾಲಾಗಿ ಪರಿಣಮಿಸಿದೆ.

ಮಧ್ಯಮ ಕುಟುಂಬದಲ್ಲಿದ್ದು, ಏನೋ ಕೆಲಸ ಮಾಡಿ ಜೀವನ ಕಟ್ಟಿಕೊಂಡು ಎರಡು ಹೊತ್ತು ಉಂಡು, ಉತ್ತಮ ನಡತೆಯುಳ್ಳ ಅದೆಷ್ಟೋ ಹುಡುಗರಿಗೆ ಕನ್ಯೆ ಸಿಗುತ್ತಿಲ್ಲ. ಹಾಗಾಗಿ ಮದುವೆ ವಯಸ್ಸಿಗೆ ಬಂದ ಮಕ್ಕಳ ಪಾಲಕರು ಚಿಂತೆಯಲ್ಲಿ ಮುಳುಗುವಂತೆ ಆಗಿದೆ. ಸಮಾಜದಲ್ಲಿ ಸಾಕಷ್ಟು ವಿದ್ಯಾವಂತ ಕನ್ಯೆಯರಿದ್ದಾರೆ. ಕೆಲವರು ಉನ್ನತ ವ್ಯಾಸಂಗ ಮಾಡಿ ಪಾಲಕರು, ಸಮಾಜಕ್ಕೆ ಉತ್ತಮ ಹೆಸರು ತಂದು ಕೀರ್ತಿ ಹೆಚ್ಚಿಸಿದವರು ಇದ್ದಾರೆ. ವಿದ್ಯಾಭ್ಯಾಸದಲ್ಲಿ ಯುವಕರಿಗಿಂತ ಯುವತಿಯರದ್ದೇ ಮೇಲುಗೈ ಸಾಧನೆ ನಾವೆಲ್ಲರೂ ಹೆಮ್ಮೆ ಪಡುವ ವಿಷಯವೇ ಸರಿ.

ಇದರ ಮಧ್ಯೆ ವಯಸ್ಸಿಗೆ ಬಂದ ಮಕ್ಕಳ ಮದುವೆ ವಿಚಾರ ಸಾಕಷ್ಟು ಗೊಂದಲಕ್ಕೀಡಾಗುವಂತೆ ಕಾಡುತ್ತಿದೆ. ಮಗಳಿಗೆ ಈ ವರ ಬೇಡ, ಇನ್ನೂ ಹೆಚ್ಚು ಓದಿರಬೇಕು, ಲಕ್ಷಗಟ್ಟಲೆ ಸಂಬಳ ಬೇಕು ಎನ್ನುವ ಅಂಶ ಹೆಚ್ಚಿನವರ ತಲೆ ಹೊಕ್ಕಿದೆ. ವರನ ನಡತೆ ಉತ್ತಮವಾಗಿದ್ದು, ಒಳ್ಳೆಯ ಕುಟುಂಬ ಹಿನ್ನೆಲೆ, ದುಡಿದು ತಿನ್ನುವ ಹುಡುಗ ಚೆನ್ನಾಗಿ ನೋಡಿಕೊಂಡರೆ ಸಾಕು ಎನ್ನುವ ವಿಚಾರ ತೀರಾ ಕುಂಟಿತಗೊಳ್ಳುತ್ತಿರುವು ಮಧ್ಯಮ ವರ್ಗದವರನ್ನು ಕಂಗಾಲಾಗಿಸಿದೆ.

ಮಕ್ಕಳ ಬೇಡಿಕೆಗಿಂತ ಪಾಲಕರ ಹಗಲು ಕನಸುಗಳೇ ಪರೋಕ್ಷವಾಗಿ ಅವರ ಬಾಳಿನ ಜೊತೆ ಆಟವಾಡಿದಂತಾಗುತ್ತಿದೆ. ಇದರಿಂದ ಸಮಾಜದ ಅದೆಷ್ಟೋ ಜನ ಅನಿವಾರ್ಯವಾಗಿ ಅನ್ಯ ಜಾತಿಯ ಯುವತಿಯನ್ನು ಓಲೈಸಿಕೊಳ್ಳುವಂತಾಗಿದೆ. ಪಾಲಕರಿಗೆ ಹೇಳಿಕೊಳ್ಳಲಾಗದೆ ಇತರರು ಹೆಣೆಯುತ್ತಿರುವ ಷಡ್ಯಂತ್ರಕ್ಕೆ ಮಕ್ಕಳು ಆಕರ್ಷಿತರಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಅದೆಷ್ಟೋ ಉದಾಹರಣೆಗಳು ನಮ್ಮೆದುರಿಗಿವೆ. ಆದರೂ ಒಂದು ಸಂಸಾರ ಕೂಡಿಸುವ ನಿಟ್ಟಿನಲ್ಲಿ ಯೋಚನೆಗಳು ನಡೆಯುತ್ತಿಲ್ಲ ಎನ್ನುವ ಕೊರಗು ಅಂತು ಇದ್ದೇ ಇದೆ. ಈ ಬಗ್ಗೆ ಸಮಾಜದ ಹಿರಿಯರು ಚಿಂತಿಸುವ ಅಗತ್ಯವಿದೆ.

ವಧು-ವರ ಸಮ್ಮೇಳನ ಆಯೋಜನೆ ಆಗಲಿ : ಬೆಂಗಳೂರಿನಿಂದ ಗಡಿಯ ಗುರುಮಠಕಲ್ ವರೆಗೂ ಸಮಾಜದವರು ವ್ಯಾಪಿಸಿದ್ದಾರೆ, ಇಡೀ ರಾಜ್ಯದ ವಧು-ವರರು ತಮ್ಮ ಅರ್ಹತೆಗೆ ತಕ್ಕ ಜೋಡಿ ಹುಡುಕುವ ನಿಟ್ಟಿನಲ್ಲಿ ಸಮಾಜವೇ ಸಂಪರ್ಕಕೊಂಡಿ ಯಾಗಬೇಕಿದೆ. ಹೀಗಾಗಿ ರಾಜ್ಯ ಮಟ್ಟದ ವಧು- ವರ ಸಮ್ಮೇಳನ ಆಯೋಜಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.

Spread the love

Leave a Reply

Your email address will not be published. Required fields are marked *

error: Content is protected !!