ಗುರುಮಠಕಲ್ ನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಲು ಒತ್ತಾಯ
ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿಗೆ ಅಗ್ನಿಶಾಮಕ ಠಾಣೆಯನ್ನು ಪ್ರಾರಂಭಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗುರುಮಠಕಲ್ ತಾಲ್ಲೂಕ ಘಟಕ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಅಗ್ನಿ ಶಾಮಕ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ತಾಲ್ಲೂಕು ಅಧ್ಯಕ್ಷ ಶರಣಬಸಪ್ಪ ಯಲ್ಹೇರಿ ಮಾತನಾಡಿ, ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕು ಕೇಂದ್ರವಾಗಿ ಸುಮಾರು 9 ವರ್ಷಗಳಾಗಿದ್ದು, ಆದರೆ ಇಲ್ಲಿಯವರೆಗೂ ಇಲ್ಲಿ ಅಗ್ನಿಶಾಮಕ ಠಾಣೆ ಪ್ರಾಂಭವಾಗಿಲ್ಲ. ಇದರಿಂದ ಇಲ್ಲಿನ ಗ್ರಾಮೀಣ ಭಾಗದಲ್ಲಿ ಅಗ್ನಿ ಅವಘಡಗಳು, ಬಣಮೆಗಳು ಬೆಂಕಿಗೆ ಆಹುತಿಯಾಗಿ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಏಕೈಕ ಶಾಮಕ ಠಾಣೆ ಇರುವುದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಯಾದಗಿರಿಯಿಂದ ಗುರುಮಠಕಲ್ 50 ಕಿಮೀ ದೂರದಲ್ಲಿದ್ದು, ಯಾದಗಿರಿಯಿಂದ ಗುರುಮಠಕಲ್ ತಾಲೂಕಿನ ಗಡಿ ಭಾಗದ ಹಳ್ಳಿಗಳಿಗೆ 65-70 ಕಿಮೀ ದೂರವಿದ್ದು, ಅನೇಕ ಕಡೆ ಬೆಂಕಿಗೆ ಆಹುತಿಗಳು ಹಾಗೂ ಬೇಸಿಗೆಯಲ್ಲಿ ಕೂಡಾ ಅಗ್ನಿ ಅವಘಡಗಳು ಸಂಭವಿಸುತ್ತವೆ.
ನಮ್ಮ ಭಾಗದಲ್ಲಿ ಅತೀ ಹೆಚ್ಚು ಜೋಳ ಬೆಳೆಯುವುದರಿಂದ ಅದರ ಸೊಪ್ಪೆಯನ್ನು ಬೇರೆ ಕಡೆ ತೆಗೆದುಕೊಂಡು ಹೋಗುವಾಗ ಹಲವಾರು ಅಗ್ನಿ ಅವಘಡ ಸಂಭವಿಸಿದ್ದು, ಗುಡ್ಡಗಾಡು ಪ್ರದೇಶದಲ್ಲಿ ಕೂಡಾ ಕಾಡ್ಲಿಚ್ಚು ಹರಡುತ್ತದೆ.
ಆದ ಕಾರಣ ಯಾದಗಿರಿ ಜಿಲ್ಲಾ ಕೇಂದ್ರದಿಂದ ಗುರುಮಠಕಲ್ ಭಾಗದ ಹಳ್ಳಿಗಳಿಗೆ ಅಗ್ನಿಶಾಮಕ ವಾಹನ ತಲುಪುದರಲ್ಲಿ ಸಂಪೂರ್ಣ ಕೈ ಮೀರಿ ಹೋಗಿರುತ್ತದೆ. ಪ್ರತಿ ವರ್ಷವೂ ಇದೇ ರೀತಿ ಬೇಸಿಗೆ ಸಮಯದಲ್ಲಿ ಹಲವಾರು ಬಾರಿ ಜಿಲ್ಲಾಡಳಿತ ಗಮನಕ್ಕೆ ತಂದರೂ ಕೂಡಾ ಇಲ್ಲಿಯವರೆಗೆ ಗುರುಮಠಕಲ್ ತಾಲೂಕಿನಲ್ಲಿ ಅಗ್ನಿಶಾಮಕ ವಾಹನದ ವ್ಯವಸ್ಥೆ ಆಗಿಲ್ಲ.
ಕಾರಣ ಈ ವರ್ಷ ಬೇಸಿಗೆ ಮುಗಿಯುವವರೆಗೂ ಒಂದು ವಾಹನವನ್ನು ಗುರುಮಠಕಲ್ ಕೇಂದ್ರ ಸ್ಥಾನದಲ್ಲಿ ವ್ಯವಸ್ಥೆ ಮಾಡಿಕೊಡುವಂತೆ ಅವರು ಮನವಿ ಮಾಡಿಕೊಂಡರು.
ಇದಲ್ಲದೇ ಗುರುಮಠಕಲ್ ನಲ್ಲಿ ಈಗಾಗಲೇ ಇಲಾಖೆಯ ಅಗ್ನಿ ಶಾಮಕ ಠಾಣೆಗೆ ಜಾಗೆಯೂ ನಿಗದಿಯಾಗಿದೆ. ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಲಿಂಗಾರಡ್ಡಿ ವಡವಟ್, ಅಬ್ದುಲ್ ರಿಯಾಜ್, ಮಲ್ಲೇಶ ಪಸಪುಲ್, ತಮ್ಮಣ್ಣ ಪೂಜಾರಿ ಪಸಪುಲ್ ಸೇರಿದಂತೆ ಇನ್ನಿತರರು ಇದ್ದರು.
