ರವಿವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ ಮಳೆ | ಅಪಾರ ಭತ್ತ ಹಾನಿಗೆ ರೈತ ಕಂಗಾಲು | ಮನೆ ಹಾನಿಯ ಕುರಿತು ಪರಿಹಾರ ಒದಗಿಸಲು ಕ್ರಮವಹಿಸಿ | ಕಾರ್ಯ ಪ್ರವೃತರಾದ ಅಧಿಕಾರಿಗಳು
ಗುರುಮಠಕಲ್: ರವಿವಾರ ಮಧ್ಯಾಹ್ನ ಗುರುಮಠಕಲ್ ತಾಲೂಕಿನಲ್ಲಿ ಸುರಿದ ಭಾರಿ ಆಲಿಕಲ್ಲು ಮಳೆ ಅವಾಂತರ ಸೃಷ್ಟಿಸಿದ್ದು, ಈ ಬಗ್ಗೆ ಸಮಗ್ರ ಸರ್ವೇ ಮಾಡಿ ಸರ್ಕಾರದ ಸಮರ್ಪಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲು ಶಾಸಕ ಶರಣಗೌಡ ಕಂದಕೂರ ಅಧಿಕಾರಿಗಳಿಗೆ ಸೂಚಿಸಿದರು.
ಗುರುಮಠಕಲ್ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮಾಧ್ಯಮದವರನ್ನು ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ಹಾನಿಯಾದ ಕುರಿತು ವರದಿಯಿಂದ ತಿಳಿದು ಬಂದಿದೆ, ರೈತರೂ ಸಂಪರ್ಕಿಸಿ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಯಾದಗಿರಿ, ಗುರುಮಠಕಲ್ ತಹಶೀಲ್ದಾರರಿಗಘ ಸೂಚನೆ ನೀಡಿದ್ದು, ಆರ್ ಐ, ವಿ ಎಂ ಅವರಿಂದ ಸರ್ವೇ ಮಾಡಿಸಿ ವರದಿ ಪಡೆದು ಹಾನಿಯಾದವರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮವಹಿಸಲು ತಿಳಿಸಲಾಗಿದೆ ಎಂದರು.
ತಹಸೀಲ್ದಾರ್ ಶಾಂತಗೌಡ ಬಿರಾದಾರ, ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್, ಮುಖ್ಯಾಧಿಕಾರಿ ಭಾರತಿ ದಂಡೋತಿ, ಜಿ.ತಮ್ಮಣ್ಣ, ಶುಭಾಷ ಕಟಕಟೆ, ಶರಣು ಆವಂಟಿ, ಪ್ರಕಾಶ ನೀರೆಟಿ, ಮಲ್ಲಿಕಾರ್ಜುನ ಅರುಣಿ, ಅಶೋಕ ಕಲಾಲ್, ಅಂಬಾದಾಸ ಜೀತ್ರಿ ಇತರರು ಇದ್ದರು.
ಕಂದಾಯ, ಕೃಷಿ ಅಧಿಕಾರಿಗಳ ಜಂಟಿ ಸಮೀಕ್ಷೆ ಆರಂಭ: ಗುರುಮಠಕಲ್ ಮತಕ್ಷೇತ್ರದಲ್ಲಿ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರ ಜಮೀನುಗಳಿಗೆ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ಆರಂಭಿಸಿದ್ದಾರೆ.
ಪಸಪುಲ್ ತಾಂಡಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ಹಾನಿಯಾದ ವಿವರ ಸಂಗ್ರಹಿಸಿದರು.
