ಮಾಜಿ ಶಾಸಕ‌ ನಾಗನಗೌಡ ಅವರ ದ್ವಿತೀಯ ಪುಣ್ಯ ಸ್ಮರಣೆ ತನ್ನಿಮಿತ್ತ ಈ ವಿಶೇಷ ಲೇಖನ.

ಸಾಮಾಜಿಕ ನ್ಯಾಯದ ಪ್ರತಿಬಿಂಬ ಕಂದಕೂರ | ಗಡಿನಾಡಿನ ಜನರಲ್ಲಿ ಚಿರಸ್ಥಾಯಿಯಾದ ದಳಪತಿ

ಹೋರಾಟವೇ ನಾಗನಗೌಡರ ಉಸಿರು….1970ರ ದಶಕದಲ್ಲಿ ಕಾಲೇಜು ಕಟ್ಟೆ ಇಳಿದು ಬಂದು ರಾಜಕೀಯ ರಂಗದ ಮೆಟ್ಟಿಲೇರಿದ ನಾಗನಗೌಡ ಕಂದಕೂರ ತಮ್ಮ ಅಣ್ಣ ದಿ.ಸದಾಶಿವರಡ್ಡಿ ಗರಡಿಯಲ್ಲಿ ಪಳಗಿ, ಅವರ ಆದರ್ಶ ಮತ್ತು ಮನೆತನದ ಹೋರಾಟದ ಕಿಚ್ಚನ್ನು ಮಡಿಲಲ್ಲಿ ಕಟ್ಟಿಕೊಂಡು ರಾಜಕೀಯ ಶರಧಿಯಲ್ಲಿ ಈಜಲು ಆರಂಭಿಸಿದರು. ಕ್ಷೇತ್ರದ ಜನ ಮತ್ತು ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಅತ್ಯಾಚಾರ, ದರ್ಪ, ದೌರ್ಜನ್ಯ ಕಂಡರೆ ಕೆಂಡವಾಗುತ್ತಿದ್ದರು. ಬಡವರ ಬಗ್ಗೆ ಬರೀ ಮಾತಿನ ಮೂಲಕ ಮಮತೆ ತೋರಿದವರಲ್ಲ. ಅಸ್ಪೃಶ್ಯತೆ ಹೆಸರಲ್ಲಿ ಢೋಂಗಿ ರಾಜಕೀಯ ಮಾಡಿದವರಲ್ಲ. ಅವರ ಹೊಟ್ಟೆ, ಬಟ್ಟೆ ನೋಡಿ ಕೃತಿಯ ಮೂಲಕ ಕಾಳಜಿ ತೋರುತ್ತಿದ್ದರು.  ಸಾಮಾಜಿಕ ಪಿಡುಗಾಗಿದ್ದ ಸಂದರ್ಭದಲ್ಲಿ ಇವರು ಮುಟ್ಟು- ತಟ್ಟುಗಳನ್ನು ಮೆಟ್ಟಿನಿಂತು ಇವ ನಮ್ಮವ.. ಇವ ನಮ್ಮವ.. ಎಂಬ ಸರ್ವ ಸಮಾನತೆ ಭಾವ ಮೂಡಿಸಿದರು.

ಶಂಭುಲಿಂಗಪ್ಪ ಅರುಣಿ ಗಾಜರಕೋಟ✍️

ಯಾದಗಿರಿ : ಹೈದರಾಬಾದ್ (ಕಲ್ಯಾಣ) ಕರ್ನಾಟಕದ ಅತಿ ಹಿಂದುಳಿದ ಮತಕ್ಷೇತ್ರ ಎಂದೇ ಗುರುತಿಸಿಕೊಂಡಿರುವ ಗುರುಮಠಕಲ್‌ನ ಸಮಗ್ರ ಅಭಿವೃದ್ಧಿ ಕನಸು ಕಂಡು ಜೀವನಪೂರ್ತಿ ತಾನು ನಂಬಿದ್ದ ಸಿದ್ಧಾಂತಕ್ಕೆ ಕಟಿಬದ್ಧರಾಗಿ ನಿಂತಿದ್ದ ಮಾಜಿ ಶಾಸಕ ನಾಗನಗೌಡ ಕಂದಕೂರ ಇಹಲೋಕ ತ್ಯಜಿಸಿ ಜ.28ಕ್ಕೆ ಎರಡು ವರ್ಷ ಗತಿಸಿಹೋಗಿವೆ.

1972ರ ಕಾಲಘಟ್ಟದಲ್ಲಿ ಜೆಡಿಎಸ್ ರಾಜ್ಯದಲ್ಲಿ ಅತ್ಯಂತ ಉತ್ತುಂಗದಲ್ಲಿದ್ದ ಪ್ರಾದೇಶಿಕ ಪಕ್ಷ. ದಿ.ಸದಾಶಿವರಡ್ಡಿ ಕಂದಕೂರ ಆದಿಯಾಗಿ ಇಡೀ ಕಂದಕೂರ ಕುಟುಂಬ ಜೆಡಿಎಸ್ ಅದರಲ್ಲೂ ವಿಶೇಷವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬಕ್ಕೆ ಪರಮಾಪ್ತ. ಒಂದೂವರೆ ದಶಕದಿಂದ ತೆನೆಹೊತ್ತ ಮಹಿಳಾ ಪಕ್ಷ ಹಲವು ಏಳು-ಬೀಳು ಕಂಡಿದ್ದು, ಸಾಕಷ್ಟು ನಾಯಕರು ಅಲ್ಲಿಂದ ರಾಷ್ಟ್ರೀಯ ಪಕ್ಷಗಳಿಗೆ ವಲಸೆ ಹೋಗಿ ರಾಜಕೀಯ ಬದುಕು ಕಟ್ಟಿಕೊಂಡರೂ ನಾಗನಗೌಡ ಮಾತ್ರ ದೇವೇಗೌಡರ ಹೆಗಲಿಗೆ ಹೆಗಲು ಕೊಟ್ಟು ಕಲ್ಯಾಣ ಭಾಗದಲ್ಲಿ ಪಕ್ಷದ ಅಸ್ತಿತ್ವ ಉಳಿಸಿದ ನಿಷ್ಠಾವಂತ ನಾಯಕ.ದೇವೇಗೌಡ ಮನೆತನದ ಜತೆ ಗಟ್ಟಿಯಾಗಿಯೇ ಬೆಳೆದ ಕಂದಕೂರ ಕುಟುಂಬದ ವಿಶ್ವಾಸ ಇಂದಿಗೂ ಹಾಗೆಯೇ ಇದೆ. 1986 ರಲ್ಲಿ ಅವಿಭಜಿತ ಕಲಬುರಗಿ ಜಿಲ್ಲಾ ಪರಿಷತ್‌ಗೆ ಕಂದಕೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಚುನಾಯಿತರಾಗಿದ್ದ ನಾಗನಗೌಡ ಅವರು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದರು. ಗಡಿ ಭಾಗದ ಗುರುಮಠಕಲ್ ಕ್ಷೇತ್ರದಲ್ಲಿ ಅಂದು ಅನೇಕ ಸರ್ಕಾರಿ ಶಾಲೆ, ಆಸ್ಪತ್ರೆಗಳ ನಿರ್ಮಾಣದಲ್ಲಿ ನಾಗನಗೌಡ ಕಂದಕೂರ ವಹಿಸಿದ್ದ ಮುತುವರ್ಜಿ ಅಪಾರ.

1998 ರಲ್ಲಿ ವಿಎಸ್‌ಎಸ್‌ಎಸ್‌ಎನ್ ಅಧ್ಯಕ್ಷರಾಗಿ ರೈತರ ಅಭ್ಯುದಯಕ್ಕೆ ಟೊಂಕಕಟ್ಟಿ ನಿಂತ ನಾಗನಗೌಡರು, ಯಾದಗಿರಿ ಎಪಿಎಂಸಿ ಅಧ್ಯಕ್ಷರಾಗಿ ಇಂದಿಗೂ ನೆನಪಿಡುವಂಥ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. 2004 05ರ ವಿಧಾನಸಭಾ ಚುನಾವಣೆಗೆ ಯಾದಗಿರಿ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆ ಶುರುವಾಯಿತು. ಆಗ ಜೆಡಿಎಸ್‌ನಲ್ಲೇ ಇದ್ದ ಡಾ.ವೀರಬಸವಂತರಡ್ಡಿ ಮುದ್ನಾಳ್ ಅವರಿಗೆ ದೊಡ್ಡಗೌಡರು ಟಿಕೆಟ್ ನೀಡಲು ನಿರಾಕರಿಸಿದರು.

ತಂದೆಯಂತೆ ಮಗ ಸಹ ಶಿಸ್ತಿನ ಸಿಪಾಯಿಗಿದ್ದ ನಾಗನಗೌಡ ಕಂದಕೂರ ಎಂದರೆ ಶಿಸ್ತು. ಸದಾ ಶ್ವೇತ ಬಣ್ಣದ ಜುಬ್ಬಾ ಮತ್ತು ಧೋತರ, ಅಗಲವಾದ ಮುಖಕ್ಕೆ ಹೊಂದುವ ಚಸ್ಮಾದೊಂದಿಗೆ ಝಲಕ್ ಕೊಡುವ ಮೂಲಕ ಯುವಕರನ್ನೂ ನಾಚಿಸುವಂಥ ಶಿಸ್ತು ಮೈಗೂಡಿಸಿಕೊಂಡಿದ್ದವರು. ಅದರಂತೆ ಸಮಯ ಪಾಲನೆಯಲ್ಲಿ ಕಂದಕೂರ ಎಂದಿಗೂ ಹಿಂದೆ ಬಿದ್ದವರಲ್ಲ. ಅದರಂತೆ ಅವರ ಪುತ್ರ ಹಾಲಿ‌ ಶಾಸಕ ಶರಣಗೌಡ ಕಂದಕೂರ ಸಹ ಶಿಸ್ತು ಹಾಗೂ ಸಂಯಮ ಮೈಗೂಡಿಸಿಕೊಂಡು ತಂದೆ ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದಾರೆ.

ಅಂದು ಕ್ಷೇತ್ರದಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರೋಧಿ ಅಲೆ ಇತ್ತು. ಅದನ್ನು ಎನ್‌ಕ್ಯಾಶ್ ಮಾಡಿಕೊಳ್ಳಬೇಕಾದರೆ ಸಮರ್ಥ ಅಭ್ಯರ್ಥಿ ಬೇಕಿತ್ತು. ಇದನ್ನು ಸೂಕ್ಷ್ಮವಾಗಿಯೇ ಗಮನಿಸಿದ್ದ ಜೆಡಿಎಸ್ ಬ್ಲಾಕ್ ಅಧ್ಯಕ್ಷರೂ ಆಗಿದ್ದ ನಾಗನಗೌಡ ಕಂದಕೂರ ಅವರು ಡಾ.ಮುದ್ನಾಳ್ ಪಕ್ಷೇತರ ಅಭ್ಯರ್ಥಿಯಾಗಿ ಯಾದಗಿರಿಯಿಂದ ಸ್ಪರ್ಧಿಸಿದ್ದರ ಹಿಂದಿನ ಶಕ್ತಿಯಾದರು.

ಕಾರಿನ ಚಿಹ್ನೆಯೊಂದಿಗೆ ಕಣಕ್ಕಿಳಿದ ಡಾ.ವೀರಬಸವಂತರಡ್ಡಿ ಮುದ್ನಾಳ್‌ಗೆ ನಾಗನಗೌಡ ಕಾಲಕಾಲಕ್ಕೆ ಮಾರ್ಗದರ್ಶನ ಮಾಡಿ ಪ್ರಚಂಡ ಬಹುಮತದಿಂದ ಗೆಲ್ಲಲು ಏಣಿಯಾದರು. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಮತ್ತೆ ಡಾ.ವೀರಬಸವಂತರಡ್ಡಿ ಜೆಡಿಎಸ್ ಪಾಳಯ ಸೇರಿದರು. ಆದರೆ 2006-07ರಲ್ಲಿ ಧರ್ಮಸಿಂಗ್ ಸರ್ಕಾರ ಬಿದ್ದು, ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಅಽಕಾರ ಹಿಡಿಯಿತು. ಈ ಸಂದರ್ಭದಲ್ಲಿ ನಾಗನಗೌಡ ಕೆಲವೇ ಅವಽಗೆ ಎಚ್‌ಕೆಡಿಬಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೂ ಉಂಟು. ಇನ್ನು 2008 ರಲ್ಲಿ ಗುರುಮಠಕಲ್ ಕ್ಷೇತ್ರ ಮರು ವಿಂಗಡಣೆಯಾಗಿ ಮೀಸಲಿನಿಂದ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಬಹುಶಃ ಗುರುಮಠಕಲ್ ಜನತೆ ನಾಗನಗೌಡ ಕಂದಕೂರ ಅದೃಷ್ಟಕ್ಕಾಗಿಯೇ ಸಾಮಾನ್ಯ ಕ್ಷೇತ್ರವಾಯಿತೇನೋ ಎಂದು ಭಾವಿಸಿದ್ದರು. ಅಂದು ಜೆಡಿಎಸ್‌ನಿಂದ ವಿಧಾನಸಭೆ ಚುನಾವಣೆಗೆ ಸ್ಪಽðಸಿದ ನಾಗನಗೌಡ ಪರಾಭವಗೊಂಡರು. ಆದರೂ ಕ್ಷೇತ್ರದಲ್ಲಿ ಜನರೊಂದಿಗೆ ನಿಕಟ ಸಂಪರ್ಕ, ನಿರಂತರ ಒಡನಾಟ ಇಟ್ಟುಕೊಳ್ಳುವುದನ್ನು ಬಿಡಲಿಲ್ಲ. 2013ರ ಚುನಾವಣೆಯಲ್ಲೂ ಕಂದಕೂರಗೆ ಅದೃಷ್ಟದ ಮಾಲೆ ಬೀಳಲಿಲ್ಲ. ಕೆಲವೇ ಮತಗಳ ಅಂತರದಿಂದ ಸೋಲುಂಡು ರಾಜಕೀಯದ ಸಹವಾಸವೇ ಬೇಡ ಎಂದು ಒಂದೆರಡು ವರ್ಷ ದೂರವೇ ಉಳಿದರು. ಇದು ಕಂದಕೂರ ಮನೆತನವನ್ನೇ ನಂಬಿದ್ದ ನಾಗನಗೌಡ ಮತ್ತು ಅವರ ಪುತ್ರ ಶರಣಗೌಡ ಕಂದಕೂರರ ಸಾವಿರಾರು ಬೆಂಬಲಿಗರಲ್ಲಿ ನಿರಾಸೆ ಮೂಡಿಸಿತ್ತು.

ಪುತ್ರನಿಗೆ ಕ್ಷೇತ್ರ ಬಿಟ್ಟ ಕಂದಕೂರ ಗೌಡರು… 2018 ರಲ್ಲಿ ರಾಜ್ಯದಲ್ಲಿ ಅನಿರೀಕ್ಷಿತವಾಗಿ ಜೆಡಿಎಸ್,ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಮೊದಲ ಬಾರಿಗೆ ಶಾಸಕರಾಗಿದ್ದ ನಾಗನಗೌಡರಿಗೆ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕೆಬಿಟ್ಟಿತು ಎಂಬ ಖುಷಿಯಲ್ಲಿ ಕ್ಷೇತ್ರದ ಜನರಿದ್ದರು. ಆದರೆ, ಕಾರಣಾಂತರಗಳಿಂದ ಅವರು ಮಂತ್ರಿಯಾಗದಿದ್ದರೂ, ಎಚ್.ಡಿ.ದೇವೇಗೌಡರು ನಾಗನಗೌಡರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷಗಿರಿ ನೀಡಿದರು. ಮಂಡಳಿಯಲ್ಲಿ ಅಲ್ಪಾವಧಿಯಲ್ಲೇ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ ಶಾಸಕ ಕಂದಕೂರ, 2023ರಲ್ಲಿ ರಾಜಕೀಯ ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಅವರ ಪುತ್ರ ಯೂತ್ ಐಕಾನ್ ಶರಣಗೌಡ ಕಂದಕೂರಗೆ ಕ್ಷೇತ್ರ ಬಿಟ್ಟುಕೊಟ್ಟ ಶಾಸಕರಾಗಿ ಆಯ್ಕೆಯಾಗಲು ಶ್ರಮಿಸಿದ್ದಲ್ಲದೆ, ನಾಗನಗೌಡರು ಕೊನೆ ದಿನಗಳಲ್ಲಿ ನೆಮ್ಮದಿಯ ಜೀವನ ಸಾಗಿಸಿದರು.

ಎಲ್ಲರ ಒತ್ತಾಸೆ ಮೇರೆಗೆ 2018ರ ವಿಧಾನಸಭೆ ಚುನಾವಣೆ ಅಖಾಡಕ್ಕಿಳಿದಿದ್ದ ನಾಗನಗೌಡರು ಗೆಲುವಿನ ನಗೆ ಬೀರುವ ಮೂಲಕ ಗುರುಮಠಕಲ್‌ನಲ್ಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಕಟ್ಟಿದ್ದ ಕಾಂಗ್ರೆಸ್ ಕೋಟೆಯನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರ ಪುತ್ರ ಶರಣಗೌಡ ಕಂದಕೂರ ಶಾಸಕರಾಗಿ ಆಯ್ಕೆಯಾದ್ದಾರೆ.

ಸದಾ ಹೋರಾಟ, ಅನ್ಯಾಯದ ವಿರುದ್ಧ ಸೆಟೆದು ನಿಂತು ತುಳಿತಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಿದ ಕಂದಕೂರ ಮನೆತನ ರಾಜಕೀಯ ಕ್ಷೇತ್ರದಲ್ಲಿ ಗಳಿಸಿದ್ದಕ್ಕಿಂದ ಕಳೆದುಕೊಂಡಿದ್ದೇ ಹೆಚ್ಚು. ಮಧ್ಯಮ ವರ್ಗದ ಕಂದಕೂರ ಮನೆತನ ರಾಜಕೀಯ ಸಹವಾಸದಿಂದಾಗಿ ಮಾನಸಿಕ ನೆಮ್ಮದಿ, ಆರ್ಥಿಕವಾಗಿಯೂ ಸಾಕಷ್ಟು ಜರ್ಜರಿತಗೊಂಡಿತು. ಈ ಮನೆತನದ ಜತೆಗಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದವರೇನೂ ಕಮ್ಮಿ ಇಲ್ಲ ಎನ್ನಬಹುದು.

Spread the love

Leave a Reply

Your email address will not be published. Required fields are marked *

error: Content is protected !!