ಗುರುಮಠಕಲ್: ವಿಶ್ವ ಬಂಧುತ್ವದ ಆದರ್ಶವನ್ನು ಪ್ರತಿಪಾದಿಸಿ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆಗಳು ಸಾರ್ವಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ದಯಾನಂದ ಹಿರೇಮಠ ಅಭಿಪ್ರಾಯಪಟ್ಟರು.
ಪಟ್ಟಣದ ಪುರಸಭೆ ಆವರಣದಲ್ಲಿ ರವಿವಾರ ಜರುಗಿದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ ಅಂಗವಾಗಿ ಭಾವಚಿತ್ರಕ್ಕೆ ಪೂಜೆಗೈದು ಅವರು ಮಾತನಾಡಿದರು.
ಅಂತರಂಗ ಹಾಗೂ ಬಹಿರಂಗ ಶುದ್ಧಿಗೆ ಪ್ರಾಧಾನ್ಯತೆ ನೀಡಿದ ರೇಣುಕಾಚಾರ್ಯರು ಧರ್ಮದ ದಶ ಗಾತ್ರಗಳನ್ನು ಶೋಧಿಸಿ ಭಕ್ತರನ್ನು ಉದ್ಧರಿಸಿದರು, ಮಹಾಜ್ಞಾನಿ ಅಗಸ್ತ್ಯ ಮಹರ್ಷಿಗಳಿಗೆ ಶಿವಾದ್ವೈತ ತತ್ವ ಸಿದ್ಧಾಂತವನ್ನು ಬೋಧಿಸಿದ ಮಹನೀಯರು ರೇಣುಕಾಚಾರ್ಯರು ಎಂದು ಅವರು ಹೇಳಿದರು.
ಕಾಯಕ ಮತ್ತು ದಾಸೋಹದ ತತ್ವಗಳ ಮೂಲಕ ಸಮಾನತೆಯ ಸಂದೇಶ ಸಾರಿದ ರೇಣುಕಾಚಾರ್ಯರು ಮಹಿಳೆಯರು ಹಾಗೂ ರೈತ ಸಮುದಾಯದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂಧಿ ಅಶೋಕ್, ಭೀಮಾಶಂಕರ್, ವೀರಶೈವ ಸಮಾಜದ ಅಧ್ಯಕ್ಷ ಶಿವಾನಂದ ಬೂದಿ, ನಾಗೇಶ್ ಗದ್ದಗಿ, ವಿಜಯಕುಮಾರ ಹಿರೇಮಠ ಸೇರಿದಂತೆ ಸಾಬಣ್ಣ, ಬಾಬಾ, ಸೋಯಲ್ ಉಪಸ್ಥಿತರಿದ್ದರು.
