ಗುರುಮಠಕಲ್ ನಿವೃತ್ತ ಸರ್ಕಾರಿ ನೌಕರರ ಸಮ್ಮೇಳನ | ಕಾನೂನು ಅರಿವು-ನೆರವು | ಹಿರಿಯ ನಾಗರಿಕರು, ವಿಶೇಷ ಸೇವೆ ಗೈದವರು, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಗುರುಮಠಕಲ್ : ಹಿರಿಯ ನಾಗರಿಕರು, ನಿವೃತ್ತರನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದಿದ್ದ ಪಕ್ಷದಲ್ಲಿ ಕಾನೂನು ಮೂಲಕ ಮಕ್ಕಳಿಗೆ ಬರೆದುಕೊಟ್ಟ ಆಸ್ತಿಯನ್ನು ಹಿಂಪಡೆಯುವ ಅವಕಾಶವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರಿಯಪ್ಪ ಹೇಳಿದರು.
ಪಟ್ಟಣದ ಹೀರಾ ಗಾರ್ಡನ್ ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಮಟ್ಟದ ವಾರ್ಷಿಕ ಸಮ್ಮೇಳನ, 80 ವರ್ಷ ಪೂರ್ಣಗೊಂಡ ನೌಕರಿಗೆ ಸನ್ಮಾನ, ವಿಶ್ವ ಹಿರಿಯ ನಾಗರಿಕರ ದಿನ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಹಿರಿಯ ನಾಗರಿಕರನ್ನು ಕಡೆಗಣಿಸಬಾರದು. ಸೌಕರ್ಯಗಳು ಸಿಗಬೇಕು, ಸಮಾಜದ ಹೆಮ್ಮರವಾದ ಅವರನ್ನು ಗೌರವದಿಂದ ಕಾಣಬೇಕು. ಕಾನೂನು ನೆರವು ಪ್ರಾಧಿಕಾರದ ಮೂಲಕ ಕಾನೂನು ಸಹಕಾರ ಪಡೆಯಬಹುದು ಎಂದು ಜಾಗೃತಿ ಮೂಡಿಸಿ, 15100ಗೆ ಸಂಪರ್ಕಿಸಿ ಕಾನೂನು ಮಾಹಿತಿ ಪಡೆಯಬಹುದು ಎಂದರು. ಮಕ್ಕಳೊಂದಿಗೆ ಬಾಂಧವ್ಯ ಉಳಿಸಿಕೊಳ್ಳುವುದು ಅಗತ್ಯ. ಪರಸ್ಪರ ಸ್ನೇಹ ರಿಂದ ವ್ಯವಹಾರ ಇರಲಿ ಎಂದು ಸಲಹೆ ನೀಡಿದರು.
ರಾಜ್ಯ ನಿವೃತ್ತ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ ಕದಂ, ರಾಜ್ಯದಲ್ಲಿ ನಿವೃತ್ತರ ಬೇಡಿಕೆ ಈಡೇರಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಸಮಾವೇಶಕ್ಕೆ ಸಿಎಂ ಬರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಆಯುಷ್ಮಾನ ಯೋಜನೆಯಡಿ ಹಿರಿಯ ನಾಗರಿಕರ 5 ಲಕ್ಷ ಆರೋಗ್ಯ ಚಿಕಿತ್ಸೆ ಶ್ಲಾಘನೀಯ. ನಿವೃತ್ತ ನೌಕರರ ಪಿಂಚಣಿಯೂ ಕಸಿಯುವ ತಂತ್ರಗಾರಿಕೆ ನಡೆಯುತ್ತಿದೆ ಎಂದರು.
ನೌಕರರ ಪಿಂಚಣಿ ಹೆಚ್ಚಳ, ರೈಲ್ವೆಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಸೀಟು ವ್ಯವಸ್ಥೆ ಮಾಡಬೇಕು, ಶವ ಸಂಸ್ಕಾರ ನೆರವು ನೀಡಬೇಕು ಎಂದರು. ನಿವೃತ್ತರ ಆದಾಯ ತೆರಿಗೆ ವಿಧಿಸುವುದು ಸೂಕ್ತವಲ್ಲ. 5 ವರ್ಷ ಸೇವೆ ಮಾಡಿದವರಿಗೆ ಹಲವು ಸೌಲಭ್ಯಗಳನ್ನು ಇದೆ. ಆದರೇ 30 ವರ್ಷ ಸೇವೆ ಮಾಡಿದವರಿಗೆ ಇನ್ನೊಂದು ವ್ಯವಸ್ಥೆ ನ್ಯಾಯನ ಎಂದರು. ನಿವೃತ್ತ ನೌಕರರ ಭವನ ನಿರ್ಮಾಣಕ್ಕೆ ನಿವೇಶನ ಹಂಚಿಕೆ ಮಾಡಲು ಒತ್ತಾಯಿಸಿದರು. ಸಾನಿಧ್ಯ ವಹಿಸಿ ಕೇದಾರಲಿಂಗ ಸ್ವಾಮಿಗಳು ಬೆನಕನಳ್ಳಿ ಆಶೀರ್ವಚನ ನೀಡಿದರು.
ವಿಶೇಷ ಸನ್ಮಾನ : ಗುರುಮಠಕಲ್ನಲ್ಲಿ 22 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ಡಾ. ವಿ.ಸಿ. ಮೈತ್ರಿ ಈ ಭಾಗದಲ್ಲಿ ಅಮೋಘ ಸೇವೆ ನೀಡಿದ್ದು ಅವರನ್ನು ವಿಶೇಷ ಸನ್ಮಾನ ಮಾಡಲಾಯಿತು. ವೈದ್ಯ ನರಸಿಂಗರಾವ್ ವಿಶೇಷವಾಗಿ ಆಯುರ್ವೇದದಲ್ಲಿ 130 ವರ್ಷದಿಂದ ಪರಂಪರಾಗತ ಸೇವೆ ನೀಡುತ್ತಿದ್ದು, ರಾಜ್ಯ ಹೊರರಾಜ್ಯದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಸೇವೆ ಸ್ಮರಿಸಲಾಯಿತು. ವಿಶೇಷ ಆಹ್ವಾನಿತರಾದ ಡಾ. ಶಿವಪ್ರಸಾದ್ ಮೈತ್ರಿ, ಸಿದ್ಧಲಿಂಗಪ್ಪ ಆವುಂಟಿ, ಬಸ್ಸಪ್ಪ ಅರಬಿಂಜರ್ ಅವರನ್ನು ಸನ್ಮಾನಿಸಲಾಯಿತು.
80 ವರ್ಷ ಪೂರೈಸಿದ ಹಿರಿಯರಿಗೆ ಸನ್ಮಾನ: ಶರಣಯ್ಯ ಸ್ವಾಮಿ ಚಂಡರಕಿ, ಎಂ.ವೀರಣ್ಣ, ಆರ್ ವೀರಣ್ಣ, ವೆಂಕಟೇಶ ಕುಲ್ಕರ್ಣಿ, ನಾರಾಯಣರಾವ್ ಕಂಬದ್, ಹನುಮಂತರೆಡ್ಡಿ ಅವರಿಗೆ ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ, ಪಿಯು ವಿದ್ಯಾರ್ಥಿ: ಎಸ್ಸೆಸ್ಸೆಲ್ ಯಲ್ಲಿ ಹೆಚ್ಚು ಅಂಕಗಳಿಸಿದ ಚರಣ ರಾಜು ನರ್ವಿ, ಅಜಯ ಜಗದೀಶ ಶ್ರೀಗಿರಿ ಹಾಗೂ ಪಿಯುಸಿಯಲ್ಲಿ ಲಕ್ಷ್ಮಿ ಕಾನಾಗಡ್ಡ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ನಿವೃತ್ತ ನೌಕರರ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ಪ್ರಮುಖ ಬೇಡಿಕೆಗಳು: ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು, ಮೂಲ ಪಿಂಚಣಿ ಹೆಚ್ಚಳ, ಸಾರಿಗೆ ವಾಹನ ರಿಯಾಯಿತಿ 50ಕ್ಕೆ ಏರಿಕೆ, ರಿಯಾಯಿತಿ ದರದಲ್ಲಿ ನಿವೇಶನ, ತೆರಿಗೆ ವಿನಾಯಿತಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಚೇತನ ಇಲಾಖೆ ಉಪನಿರ್ದೇಶಕ ಶರಣಪ್ಪ ಪಾಟೀಲ್ , ಸಿದ್ದಣ್ಣ ಕೋಲಾರ, ವಾಹೀದಮಿಯಾ, ಪಿಐ ವೀರಣ್ಣ ಎಸ್ ದೊಡ್ಡಮನಿ, ವೈದ್ಯಾಧಿಕಾರಿ ಡಾ.ಮಹೇಶ ಸಜ್ಜನ್, ಡಾ. ಶಶಿಕಿರಣ ಹಜಾರೆ, ರವಿ ಗೋವಿನೋಲ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಂತೋಷ್ ನೀರೆಟಿ, ನಾರಾಯಣರೆಡ್ಡಿ ಪಾಟೀಲ್, ಪ್ರಾಚಾರ್ಯ ಸುದರ್ಶನ ರೆಡ್ಡಿ, ಶಿವಣ್ಣ ಕಟ್ಟಿಮನಿ ಸುರಪುರ, ಅಂಬಾರಾಯ ವಾದೆ ಇತರರು ವೇದಿಕೆಯಲ್ಲಿದ್ದರು. ಬುಡ್ಡಪ್ಪ ಜನಾರ್ಧನ ಸ್ವಾಗತಿಸಿದರು. ಮಲ್ಲಿಕಾರ್ಜುನ ಸೇಡಂಕರ್ ನಿರೂಪಿಸಿದರೆ, ಅಖಂಡೇಶ್ವರ ಹಿರೇಮಠ ಸಂಘದ ಪ್ರಮುಖ ಬೇಡಿಕೆಗಳ ಪಟ್ಟಿ ಓದಿದರು.
