ಗುರುಮಠಕಲ್ ನ ಹಿರಿಯ ಪತ್ರಕರ್ತ, ನಿವೃತ್ತ ಶಿಕ್ಷಕ ಬೂದಿ | ಎನ್ ಸಿಸಿ ಅಧಿಕಾರಿಯಾಗಿದ್ದ ವೇಳೆ ಪ್ರೇರಣೆ ಪಡೆದು ಸೈನಿಕನಾದ ಶಿಷ್ಯನಿಂದ ಗೌರವ
ಗುರುಮಠಕಲ್: ಕಳೆದ ಹಲವು ವರ್ಷಗಳಿಂದಲೂ ಬೂದಿ ಸರ್ ಅಂದರೆ, ಎಲ್ಲರಿಗೂ ಚಿರಪರಿಚಿತರು. ಯುವಕರಿಂದ ಹಿಡಿದು ಹಿರಿಯರಿಗೂ ಸನ್ಮಾರ್ಗ ತೋರುವ ಹಿರಿಮೆ ಬಸವರಾಜ ಬೂದಿ ಅವರದು.
ಅಂದಾಜು 1975 ಇಸ್ವಿ ಇರಬಹುದು, ಕಡು ಬಡ ಸ್ಥಿತಿಯಲ್ಲಿದ್ದ ತರುಣ, ಬೂದಿ ಸರ್ ಅಂದ್ರೆ ಏನೋ ಗೌರವ, ಪ್ರೀತಿ. ತಾನು ಪ್ರಾಥಮಿಕ ಹಂತದಲ್ಲಿ ಓದುತ್ತಿದ್ದ ವೇಳೆ ಬೂದಿ ಸರ್ ಎನ್ ಸಿಸಿ ಅಧಿಕಾರಿಯಾಗಿದ್ದರು, ತರುಣ ಹೈಸ್ಕೂಲ್ ವ್ಯಾಸಾಂಗದ ವೇಳೆ ಅವನಲ್ಲಿ ಏನಾದರೂ ಆಗಬೇಕು ಎನ್ನುವ ಛಲ ಕಂಡಿದ್ದರು.
ಆ ಛಲಗಾರ ಸೇಡಂ ನ ಮುರಿಗೆಣ್ಣ ನಾಗಪ್ಪ ಭೂಮಾ. ಇವರು ಬೂದಿ ಸರ್ ಅವರ ಪ್ರೇರಣೆಯಿಂದ ಎನ್ ಸಿಸಿ ತರಬೇತಿ ಪಡೆದು, ಸಿ ಗ್ರೇಡ್ ಪ್ರಮಾಣ ಪತ್ರ ಪಡೆದಿದ್ದರು. ಆಗಲೇ ನೋಡಿ ದೇಶಕ್ಕೆ ಸೇವೆ ಮಾಡುವ ಸಂಕಲ್ಪ ಮಾಡಿದ್ದರು. ಅವರ ಸಂಕಲ್ಪ ಈಡೇರಿ ಗಡಿಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ, ಬಳಿಕ ಸರ್ಕಾರಿ ನೌಕರರಾಗಿ ಶಿಕ್ಷಣ ಇಲಾಖೆಯಲ್ಲಿಯೂ ಸೇವೆ ಮಾಡಿ ನಿವೃತ್ತರಾಗಿದ್ದಾರೆ.
ಗುರುಗಳ ಮಾರ್ಗದರ್ಶನದಲ್ಲಿ ಸಾಧಿಸಿ, ದೇಶ ಸೇವೆಯ ಪ್ರೇರಣೆ ನೀಡಿದ್ದ ಬಸವರಾಜ ಬೂದಿ ಸರ್ ಅವರನ್ನು ಹುಡುಕಿಕೊಂಡು ಬಂದ ಅವರ ಶಿಷ್ಯ ಮುರಿಗೆಣ್ಣ ಅವರು ಗುರುಮಠಕಲ್ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಿ, ಆಶೀರ್ವಾದ ಪಡೆದರು. ಈ ವೇಳೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶಿವಾನಂದ ಬೂದಿ, ವಿಜಯಲಕ್ಷ್ಮಿ ಯಾಲಾಲ್ ಇತರರು ಇದ್ದರು.
