ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟ | ವೆಂಕಟೇಶ ನಗರದ ಯುವಕ ಆಯ್ಕೆ | ಆರ್ಥಿಕ ಸಂಕಷ್ಟ ಎಂದ ಪಟುವಿನ ಸಹಾಯಕ್ಕೆ ಧಾವಿಸಿ ಜಿ.ಪಂ. ಸಿಇಓ ಪ್ರೋತ್ಸಾಹ
ಯಾದಗಿರಿ: ಯಾದಗಿರಿ ತಾಲೂಕಿನ ಗುರುಮಠಕಲ್ ಕ್ಷೇತ್ರದ ವೆಂಕಟೇಶ ನಗರದ ಯುವಕ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಜಿಲ್ಲೆ ಸೇರಿ ದೇಶವೇ ಹೆಮ್ಮೆಪಡುವ ಸಂಗತಿಯಾಗಿದೆ.
ಆದರೇ ಆರ್ಥಿಕ ಸಂಕಷ್ಟದಲ್ಲಿರುವ ಕುರಿತು ಗಮನಕ್ಕೆ ಬಂದ ಒಂದೇ ದಿನದಲ್ಲಿ ಸ್ಪಂದಿಸುವ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಓರಾಡಿಯಾ ಜಿಲ್ಲಾ ಪಂಚಾಯಿತಿಯಿಂದ ₹1,78 ಲಕ್ಷ ರೂಪಾಯಿ ಸಹಾಯಧನ ಮಂಜೂರು ಮಾಡಿ ಯುವ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದಾರೆ.
ಯುವ ಕ್ರೀಡಾಪಟು ಕುಮಾರ ತಂದೆ ಠಾಕೂರ್ ರಾಠೋಡ ನ. 17 ರಿಂದ 24 ರ ವರೆಗೆ ಥೈಲ್ಯಾಂಡ್ ದೇಶದಲ್ಲಿ ನಡೆಯುವ World Ability Sports Games ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಮೂಲತಃ ಯಾದಗಿರಿ ಜಿಲ್ಲೆಯ ವೆಂಕಟೇಶ ನಗರದ (ಅಲ್ಲಿಪೂರ ತಾಂಡಾ) ನಿವಾಸಿಯಾಗಿದ್ದು, ಕ್ರೀಡೆಯಲ್ಲಿ ಭಾಗವಹಿಸಲು ಆರ್ಥಿಕ ಸಂಕಷ್ಟವಿರುವ ಮಾಹಿತಿಯನ್ನು ನ.10ರಂದು ಜಿಲ್ಲಾ ಪಂಚಾಯತ ಅಧಿಕಾರಿ ಗಮನಕ್ಕೆ ತಂದಿದ್ದರು. ಸಹಾಯಧನ ಮಂಜೂರು ಮಾಡಿ, ಕ್ರೀಡೆಯಲ್ಲಿ ಭಾಗವಹಿಸಲು ಸಹಾಯ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯಿಂದ ಥೈಲ್ಯಾಂಡ್ ದೇಶದಲ್ಲಿ ನಡೆಯುವ World Ability Sports Games ನಲ್ಲಿ ಭಾಗವಹಿಸಲು ಅವಕಾಶ ಪಡೆದಿರುವುದು ತುಂಬಾ ಸಂತಸದ ವಿಷಯವಾಗಿದ್ದು, ಕುಮಾರ ರಾಠೋಡ ಈ ಕ್ರೀಡೆಯಲ್ಲಿ ದೇಶದ ಪರವಾಗಿ ಭಾಗವಹಿಸಿ ಗೆಲುವು ಸಾಧಿಸುವುದರ ಮೂಲಕ ದೇಶ, ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.
