ಯಾದಗಿರಿ: ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿ ಎಂದು ಎಐಡಿಎಸ್ ಓ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 15, ಅಕ್ಟೋಬರ್ ರಂದು ಹೊರಡಿಸಿದ ಸುತ್ತೋಲೆಯಲ್ಲಿ KPS Magnet ಶಾಲೆಗಳೊಂದಿಗೆ ಸುತ್ತಲಿನ ಕಡಿಮೆ ದಾಖಲಾತಿಯ ಶಾಲೆಗಳನ್ನು ವಿಲೀನಗೊಳಿಸಬೇಕು ಎಂದು ಆದೇಶಿಸಿದೆ. ಅಂತೆಯೇ, KPS ಶಾಲೆಯನ್ನಾಗಿ ಉನ್ನತೀಕರಿಸುತ್ತಿರುವ ಹಲವು ಶಾಲೆಗಳಿಗೆ ಸುತ್ತಲಿನ ಶಾಲೆಗಳನ್ನು ವಿಲೀನಗೊಳಿಸಿಸಬೇಕು ಎಂಬ ಆದೇಶವನ್ನು ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದ ಹಲವು ಶಾಲೆಗಳಿಗೆ ನೀಡಲಾಗಿದೆ.
ಅಧಿವೇಶನದಲ್ಲಿ ಸಚಿವರೇ ಹೇಳಿದಂತೆ, ಗ್ರಾಮ ಪಂಚಾಯಿತಿಗೊಂದರಂತೆ KPS Magnet ಶಾಲೆಗಳನ್ನು ತೆರೆಯಲಾಗುತ್ತದೆ, ಅಂದರೆ ತಮ್ಮದೇ ಇಲಾಖೆಯ ಆದೇಶದಂತೆ ಸರ್ಕಾರ ಮುಂದುವರೆಯುತ್ತಿದೆ. ಈಗ ಮೂಡುವ ಪ್ರಶ್ನೆಯೆಂದರೆ, ಸರ್ಕಾರದ ಆದೇಶಗಳು ಹೇಳುವುದೇ ಒಂದು, ಮಂತ್ರಿಗಳ ಹೇಳಿಕೆ ಮತ್ತೊಂದು. ಜನ ಯಾವುದನ್ನು ನಂಬಬೇಕು? ಎಂದಿದ್ದಾರೆ.
ಹಾಗಾಗಿ, ಕನ್ನಡ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ಸಚಿವರ ಒಳ್ಳೆಯ ಆಶಯ ನಿಜವಾದಲ್ಲಿ, ಈ ಕೂಡಲೇ ಸರ್ಕಾರ ತನ್ನ ಅಕ್ಟೋಬರ್ 15ರ ಆದೇಶದಲ್ಲಿ ನಮೂದಿಸಿರುವ ವಿಲೀನದ ಅಂಶವನ್ನು ಹಿಂಪಡೆಯಲಿ ಜೊತೆಗೆ ವಿಲೀನದ ಹೆಸರಿನಲ್ಲಿ ಕಡಿಮೆ ದಾಖಲಾತಿಯ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಲಿಖಿತ ಆದೇಶ ಹೊರಡಿಸಲಿ ಎಂದು ಎಐಡಿಎಸ್ಓ ಯಾದಗಿರಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
