ಅರ್ಥಪೂರ್ಣವಾಗಿ ವಿಶ್ವಗುರು ಶ್ರೀ ಬಸವಣ್ಣನವರ ಜಯಂತಿ ಆಚರಣೆ | ವಿಶ್ವಗುರು ಬಸವಣ್ಣನವರು ಸಾಮಾಜಿಕ ಸಮಾನತೆಗೆ ಹೋರಾಡಿದ ಮಹಾಚೇತನ |ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅಭಿಮತ

ಯಾದಗಿರಿ: ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ ವಿಶ್ವಗುರು ಬಸವಣ್ಣನವರು ಎಲ್ಲ ಸಮಾಜದ ಏಳ್ಗೆ ಮೂಲಕ ಸಮಾನತೆ ತರಲು ಹೋರಾಡಿದರು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಇಂದು ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ,ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಅವರು ಮಾತನಾಡಿದರು.

ಹನ್ನೆರಡನೇಯ ಶತಮಾನದಲ್ಲಿಯೇ ಸಮಸಮಾಜದ ನಿರ್ಮಾಣಕ್ಕೆ ಹೋರಾಡಿದ ಶ್ರೀ ಬಸವಣ್ಣನವರು ಅನುಭವ ಮಂಟಪದ ಮೂಲಕ ಎಲ್ಲ ಸಮಾಜದವರಿಗೆ ಒಗ್ಗೂಡಿಸಿ ಸಮಾನತೆ ತರಲು ಹೋರಾಡಿದರು ಎಂದು ಹೇಳಿದರು.

ಜಗಜ್ಯೋತಿ ಶ್ರೀ ಬಸವಣ್ಣನವರು ಪ್ರಾಮಾಣಿಕತೆಯ ಸಾಕಾರ ಮೂರ್ತಿಯಾಗಿದ್ದಾರೆ. ಜಾತಿ,ವರ್ಣಭೇದ, ವರ್ಗ ಭೇದ ಸಂದರ್ಭದ ಪರಿಸ್ಥಿತಿಗಳಲ್ಲಿ ತಮ್ಮ ವಚನಗಳ ಮೂಲಕ ಸಾಮಾಜಿಕ ಸಮಾನತೆ ತರಲು ಶ್ರಮಿಸಿದರು. ಎಲ್ಲ ಜಾತಿಗಳ, ಧರ್ಮೀಯರನ್ನು ಒಗ್ಗೂಡಿಸಿದರು. ಅಂತಹ ಮಹಾನ್ ಚೇತನರ ವಚನಗಳು ಮನ: ಪರಿವರ್ತನೆ ಗೆ ನೆರವಾಗಲಿದ್ದು, ಇಂದಿನ ಯುವಜನಾಂಗ ಹಾಗೂ ಸಮಾಜಕ್ಕೆ ಉಪಯುಕ್ತ ಸಂದೇಶಗಳಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷ ಲಲಿತಾ ಅನಪುರ ಅವರು, ಎಲ್ಲ ಜಾತಿ, ಧರ್ಮದವರನ್ನು ಅನುಭವ ಮಂಟಪ ಮೂಲಕ ಒಟ್ಟುಗೂಡಿಸಿದ ಶ್ರೀ ಬಸವಣ್ಣನವರ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಹನ್ನೆರಡನೇ ಶತಮಾನದಲ್ಲಿಯೇ ಸಮಾನತೆ ಸಾರಿದ ಬ‌ಸವಣ್ಣನವರು ವಿಶ್ವಕ್ಕೆ ಸಮಾನತೆ ಪರಿಕಲ್ಪನೆ ತೋರಿ, ವಿಶ್ವಗುರು ಆಗಿದ್ದಾರೆ. ಸಮಾನತೆ,ಕಾಯಕವೇ ಕೈಲಾಸ, ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದ ಸಮಾಜ ಸುಧಾರಕರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಶ್ರೀ ಸುಭಾಶ್ಚಂದ್ರ ಕೌಲಗಿ ಅವರು, ಶ್ರೀ ಬಸವಣ್ಣನವರ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಇಂದಿನ ಯುವಜನಾಂಗಕ್ಕೆ ದಾರಿದೀಪವಾಗಿವೆ. ಸರ್ವ ಸಮಾಜದ ಸಂಘಟನಾ ಚತುರರು, ಕಾಯಕ ನಿಷ್ಠೆ, ವಿಶ್ವಕ್ಕೆ ಸಮಾನತೆ ಬೋಧಿಸಿದ ದಿವ್ಯ ಚೇತನರಾಗಿದ್ದಾರೆ. ಜಾತಿ, ವರ್ಣಭೇದ ಪದ್ಧತಿ ನಿರ್ಮೂಲನೆಗೆ ಹೋರಾಡಿದರು. ಅವರ ವಚನಗಳು ಹಾಗೂ ತತ್ವ ಆದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜಸೇವಕರಾದ ವಿಶ್ವನಾಥ್ ಕಾಜಗಾರ್,ರಮೇಶ್ ದೊಡಮನಿ,ಸದಾಶಿವಪ್ಪ ಚಂದನಕೇರಿ, ಸಿದ್ದಪ್ಪ ಹೊಟ್ಟಿ, ಅನ್ನಪೂರ್ಣ ಜವಳಿ, ಅನ್ನಪೂರ್ಣ ಸಿ.ಪಾಟೀಲ,ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್,ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್,

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಚನ್ನಪ್ಪಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ಸಿದ್ದರಾಜ ರೆಡ್ಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!