ಕಾಲುವೆಗಳಿಗೆ ಕನಿಷ್ಠ 8 ದಿನವಾದರೂ ನೀರು ಹರಿಸಿ ಬೆಳೆ ರಕ್ಷಿಸಲು ಆಗ್ರಹ | ಜಿಲ್ಲೆಯ ಜನಪ್ರತಿನಿಧಿಗಳಿಗೆ ರೈತಪರ ಕಾಳಜಿಯಿಲ್ಲ ಎಂದು ಹೋರಾಟಗಾರರ ಅಸಮಾಧಾನ
ಯಾದಗಿರಿ: ನಾರಾಯಣಪುರ ಎಡ-ಬಲದಂಡೆ ಕಾಲುವೆಗಳಿಗೆ ರೈತರ ಬೆಳೆ ರಕ್ಷಣೆಗಾಗಿ ಏಪ್ರಿಲ್ 15 ರ ವರಿಗೆ ನೀರು ಬಿಡಲು ಒತ್ತಾಯಿಸಿ ಯಾದಗಿರಿ ಜಿಲ್ಲಾ ಕೇಂದ್ರ “ಬಂದ್ ಮಾಡಿ ಸರ್ವ ಸಂಘಟನೆಗಳ ಹೋರಾಟ ಸಮಿತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ಮೆರವಣಿಗೆ ಮೂಲಕ ಶುಭಾಷ ವೃತ್ತದಲ್ಲಿ ಸಮಾವೇಶಗೊಂಡಿತು. ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು.
ನಾರಾಯಣಪುರ ಎಡದಂಡೆಯ ಕಾಲುವೆ ವ್ಯಾಪ್ತಿಯಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ, ಸುರಪುರ, ಶಹಾಪುರ, ವಡಗೇರಾ, ತಾಲೂಕಿನ 3 ಲಕ್ಷ 25 ಸಾವಿರ ಎಕರೆಯಲ್ಲಿ ಬೆಳೆದು ನಿಂತಿರುವ ಶೇಂಗಾ, ಸಜ್ಜಿ, ಜೋಳ, ಭತ್ತ, ಇತ್ಯಾದಿ ಬೆಳೆಗಳು ಕೇವಲ 20-25 ದಿನಗಳಲ್ಲಿ ಕೈಗೆ ಬರುತ್ತವೆ. ಈಗ ಭತ್ತ ಕಟಾವು ಹಂತದಲ್ಲಿ ನೀರು ಅತ್ಯವಶ್ಯಕವಾಗಿದೆ. ನೀರು ಸಿಗದೇ ಹೋದಲ್ಲಿ ಕೋಟ್ಯಾಂತರ ರೂಪಾಯಿ ಬೆಳೆಗಳು ಕಣ್ಣು ಮುಂದೆಯೇ ನಷ್ಟಹೊಂದುತ್ತವೆ.
ರೈತರು ಸಾಲ-ಸೂಲ ಮಾಡಿಕೊಂಡು ಪ್ರತಿ ಎಕರೆಗೆ 40 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ, ಇನ್ನೆನು ಒಂದೇ ತಿಂಗಳಲ್ಲಿ ಯೇ ಕೈಗೆ ಹಣ ಬರುತ್ತದೆಂಬ ಕನಸು ಬೀದಿ ಪಾಲಾಗುವಂತಾ ಗುತ್ತದೆ. ಈ ಹಿನ್ನಲ್ಲೆಯಲ್ಲಿ ತಾವು ಕೂಡಲೇ ರೈತರ ವಾಸ್ತವಿಕ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕುಡಿಯುವುದಕ್ಕೆ ಅವಶ್ಯವಿರುವಷ್ಟು ನೀರನ್ನು ಉಳಿಸಿಕೊಂಡು ಜಿಂದಾಲ್ ಕಂಪನಿಗೆ ಕೂಡುವ ನೀರನ್ನು ಬಂದ್ ಮಾಡಿ ಅದೇ ಇಂಡಿ ಬ್ರಾಂಚ್ (ಐ.ಬಿ.ಎಸ್.) ಈಗಾಗಲೇ ಹತ್ತಿ, ಜೋಳ, ಮೆಣಸಿನಕಾಯಿ, ತೊಗರಿ, ಇತ್ಯಾದಿ ಬೆಳೆಗಳು 80% ರಷ್ಟು ಕೈಗೆ ಬಂದಿವೆ, ಅಲ್ಲಿ ಕೂಡ ಕಟಾವು ನಿಟ್ಟಾಗಿ ನೀರು ಬಳಸಿಕೊಂಡು ಯಾವ ಭಾಗದಲ್ಲಿ ಅವಶ್ಯವಿದೆ ಎಂಬುವುದನ್ನು ಕೃಷಿ ಮತ್ತು ನೀರಾವರಿ ಅಧಿಕಾರಿಗಳು ವರದಿ ಸಲ್ಲಿಸಿರುತ್ತಾರೆ.
ಸಿದ್ದರಾಮಯ್ಯ ಅವರು ರೈತಪರ ಕಾಳಜಿ ಇರುವ ಮುಖ್ಯಮಂತ್ರಿ ಯಾಗಿದ್ದು ಕೂಡಲೇ ಆಲಮಟ್ಟಿ ಡ್ಯಾಮಿನಲ್ಲಿರುವ ನೀರನ್ನು ಮತ್ತು ಕೋಯ್ನಾ ಡ್ಯಾಮಿನಿಂದ ನೀರನ್ನು ಬಿಡಿಸಿ ದೇಶಕ್ಕೆ ಅನ್ನಹಾಕುವ ರೈತರನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಲಾಯಿತು.
ಈ ವೇಳೆ ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಠ, ಕನ್ನಡ ಪರ ಹೋರಾಟಗಾರ ಟಿ.ಎನ್.ಭೀಮುನಾಯಕ, ಚನ್ನಪ್ಪ ಆನೆಗುಂದಿ, ಶರಣಗೌಡ ಗೂಗಲ್, ಮಲ್ಲು ಮಾಳಿಕೇರಿ, ಮರೆಪ್ಪ ಚೆಟ್ಟೆಕರ್ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು, ರೈತಪರ ಹೋರಾಟಗಾರರು, ಕನ್ನಡ ಪರ ಸಂಘಟನೆಗಳು ಸೇರಿ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಬಹುತೇಕ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳು ಮುಚ್ಚಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಕಂಡು ಬಂತು.
