ಯಾದಗಿರಿ ಯಾತ್ರಿಕರು ದಾಳಿಯಾದ ಸ್ಥಳದಲ್ಲೇ ಇದ್ದು ಬಚಾವ್ | ರಂಗಂಪೇಟೆಯ ಸಾಫ್ಟವೇರ್ ಉದ್ಯಮಿ ಪ್ರಭಾಕರ ದಂಪತಿ, ಮಕ್ಕಳು ಪಾರು
ಯಾದಗಿರಿ: ಜಮ್ಮು ಕಾಶ್ಮೀರದ ಭಯೋತ್ಪಾದಕರ ದಾಳಿಯಲ್ಲಿ ಯಾದಗಿರಿಯ ನಾಲ್ವರು ಅದೃಷ್ಟವಶಾತ್ ಸೇಪ್ ಆಗಿದ್ದಾರೆ.
ದಾಳಿಯಾದ ಸ್ಥಳದಿಂದ ಕೂದಲೆಳೆ ಅಂತರದಲ್ಲಿದ್ದ, ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆ ನಿವಾಸಿಗಳು ಪ್ರಭಾಕರ್ ಹಾಗೂ ಮಹೇಶ್ವರಿ ದಂಪತಿ ಸೇರಿ ಮಕ್ಕಳು ದಾಳಿಯಿಂದ ಪಾರಾಗಿದ್ದಾರೆ.
ಗುಂಡಿನ ದಾಳಿ ಸದ್ದಿಗೆ ಭಯಭೀತಗೊಂಡು ಸ್ಥಳದಿಂದ ಓಡಿ ಹೋಗಿ ಬಚಾವ್ ಆಗಿದ್ದು, ಪ್ರಭಾಕರ್ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯಮಿ ಆಗಿದ್ದು, ಬೇಸಿಗೆ ರಜೆ ಅಂತ ಪತ್ನಿ ಮಕ್ಕಳೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಪೆಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ಸ್ಥಳದಿಂದ ನೂರು ಮಿಟರ್ ಅಂತರದಲ್ಲಿ ಇದ್ದೇವು ಎಂದು ಅವರು ಮಾಹಿತಿ ನೀಡಿದ್ದಾರೆ. ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಏಳು ಕಿಲೋಮೀಟರ ದೂರ ಬಂದು ಲಾಡ್ಜ್ ನಲ್ಲಿ ಸೇಪ್ ಆಗಿ ಉಳಿದಿರುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಸೇಪ್ ಆಗಿ ಶ್ರೀನಗರ ಕಡೆಗೆ ಹೊರಟ್ಟಿದ್ದೇವೆ. ರಿಟರ್ನ್ ಪ್ಲೈಟ್ ಶುಕ್ರವಾರ ಇದೆ. ಸರ್ಕಾರ ಏರ್ ಲಿಪ್ಟ್ ಮಾಡಿದರೇ ಬೆಂಗಳೂರಿಗೆ ಬರೋಕೆ ಅನುಕೂಲ ಆಗುತ್ತೆ ಎಂದು ಜಮ್ಮು ಕಾಶ್ಮೀರದಿಂದ ಪ್ರಭಾಕರ್ ವಿಡಿಯೋ ಹೇಳಿಕೆ ರಿಲೀಸ್ ಮಾಡಿದ್ದಾರೆ.
ಜಿಲ್ಲೆಯಲ್ಲಿ ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿದವರ ಮಾಹಿತಿಗೆ ಕ್ರಮ: ಯಾದಗಿರಿ ಜಿಲ್ಲೆಯಾದ್ಯಂತ ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದವರ ಮಾಹಿತಿ ಕಲೆಹಾಕಲು ಜಿಲ್ಲಾಡಳಿತ ಮುಂದಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಲಾಮ್ನಲ್ಲಿ ಮಂಗಳವಾರ ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ದಾಳಿಯಲ್ಲಿ ಕೆಲವು ಪ್ರವಾಸಿಗರು ಮೃತರಾಗಿರುವ ಹಾಗೂ ಗಾಯಗೊಂಡಿರುತ್ತಾರೆ. ಯಾದಗಿರಿ ಜಿಲ್ಲೆಯಿಂದ ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿ ಭಯೋತ್ಪಾದಕರ ದಾಳಿಯಲ್ಲಿ ಸಿಲುಕಿಕೊಂಡಿದಲ್ಲಿ ಅವರ ಮಾಹಿತಿಯನ್ನು ಸಂಬಂಧಿಸಿದವರು ಕೂಡಲೆ ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂ.ಸಂ.08473 253700 ಹಾಗೂ ಪೊಲೀಸ್ ಕಂಟ್ರೋಲ್ ಸಂ.9480803600, 08473 253736ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
