ಪತ್ರಕರ್ತರ ಮಕ್ಕಳಿಗೆ ಯಾದಗಿರಿ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ, ೮ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರ ರೂ. ನೀಡಿ ಸನ್ಮಾನ | ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಭಾಗಿ
ಇಡಿ ವರ್ಷ ಎಲ್ಲರ ಮಕ್ಕಳ ಬಗ್ಗೆ ನಾವ್ ಅವರ ಸಾಧನೆ ಕುರಿತು ಬರಿತಿವಿ. ಆದರೆ ನಮ್ಮ ಮಕ್ಕಳ ಬಗ್ಗೆ ನಾವು ಹೆಮ್ಮೆಯಿಂದ ಹೇಳಬೇಕು, ಇಷ್ಟೊಂದು ಒತ್ತಡದ ಜೀವನದಲ್ಲಿಯೂ ನಮ್ಮ ಮಕ್ಕಳ ಸಾಧನೆ ಗುರುತಿಸುವ ಕೆಲಸ ನಮ್ಮಿಂದಲೇ ಆಗಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ನಮ್ಮ ಮಕ್ಕಳ ಬಗ್ಗೆ ನಾವೇ ಪತ್ರಿಕೆಯಲ್ಲಿ ಬರೆಯುವುವಿಲ್ಲ ಇದನ್ನು ಮನಗೊಂಡು ನಾವು ೩ವರ್ಷದಿಂದ ಪತ್ರಕರ್ತ ಮಕ್ಕಳ ಪ್ರತಿಭೆ ಗುರುತಿಸಿ ಅಂತವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡುತ್ತಾ ಬರುತ್ತಿದ್ದೇವೆ. – ಮಲ್ಲಪ್ಪ ಸಂಕೀನ್ ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಾದಗಿರಿ.
ಯಾದಗಿರಿ : ತಮ್ಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹದ್ಯೋಗಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೊತ್ಸಾಹ ನೀಡುತ್ತಿರುವುದು ಅತ್ಯುತ್ತಮ ಕೆಲಸವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ ಅದನ್ನು ಗುರುತಿಸುವಂತಹ ಕಾರ್ಯ ನಾವೆಲ್ಲರೂ ಮಾಡುವುದು ಅಗತ್ಯವಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೇ ಆ ಪ್ರತಿಭೆಗೆ ಸಿಗುವ ಪ್ರೋತ್ಸಾಹ ತಪ್ಪಿದಂತಗಾಗುತ್ತದೆ. ತಮ್ಮ ಕ್ಷೇತ್ರದಲ್ಲಿಯ ಸಹದ್ಯೋಗಿ ಪತ್ರಕರ್ತರ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ್ ಮತ್ತವರ ತಂಡದ ಕಾರ್ಯ ಮೆಚ್ಚುವಂತಹದ್ದು ಎಂದು ಹೇಳಿದರು.
ಯಾದಗಿರಿ ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಮಾತನಾಡಿ, ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತಬೇಕಿದೆ, ಇಂದು ಅದು ಹೆಚ್ಚಾಗಿ ಮಕ್ಕಳಿಗೆ ಕಾಡುತ್ತಿದ್ದು, ಪಾಲಕರು ಈ ನಿಟ್ಟಿನಲ್ಲಿ ಯೋಚಿಸುವುದು ಅಗತ್ಯವಿದೆ, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಬೇಕು, ಮೊಬೈಲ್ನಿಂದ ಆದಷ್ಟು ಮಕ್ಕಳನ್ನು ದೂರವಿಟ್ಟಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇರುತ್ತದೆ. ಹೀಗಾಗಿಯೇ ನಾವು ಅವರಿಗೆ ಬೆನ್ನೆಲುಬಾಗಿ ನಿಲ್ಲುವುದು ಅಗತ್ಯವಿದೆ. ಪೂರಕವಾದ ವಾತಾವರಣ ನಿರ್ಮಾಣ ವಾಗುತ್ತದೆ ಎಂದು ಹೇಳಿದರು.
ಬಿಎಸ್ಎಫ್ ಯೋಧ ದುರ್ಗಪ್ಪ ನಾಯಕ ಮಾತನಾಡಿ, ದೇಶ ಕಾಯುವ ಸೈನಿಕರು ಹೇಗೆ ಪ್ರಾಮಾಣಿಕರಾಗಿ ಕಾರ್ಯನಿರ್ವಹಿಸಿ ದೇಶವನ್ನು ಕಾಪಾಡುತ್ತಾರೆಯೋ ಹಾಗೆ ದೇಶದ ಒಳಗೆ ಪತ್ರಕರ್ತರು ದೇಶದಲ್ಲಿ ನಡೆಯುತ್ತಿರುವ ಹಾಗು ಹೋಗುಗಳನ್ನು ಜನರಿಗೆ ತಿಳಿಸುವುದರ ಜೊತೆಗೆ ಭ್ರಷ್ಟಾಚಾರ ನಿರ್ಮೂಲನೆಯ ಕಾರ್ಯ ಮಾಡುತ್ತಿದ್ದಾರೆ, ಇದರೊಂದಿಗೆ ನೊಂದವರ, ಧ್ವನಿಯಾಗಿ ಕೂಡ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿ ದೇಶಭಕ್ತಿ ಗೀತೆಯನ್ನು ಹಾಡಿ ನೆರೆದವರಲ್ಲಿ ದೇಶಭಕ್ತಿ ಮೊಳಗಿಸುವಂತೆ ಮಾಡಿದರು.
ಪತ್ರಕರ್ತರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ್ ಮಾತನಾಡಿ, ನಾವು ನಮ್ಮ ಮಕ್ಕಳ ಪ್ರತಿಭೆಗೆ ಪ್ರೊತ್ಸಾಹಿಸಬೇಕು ಎನ್ನುವ ಒಂದೇ ಉದ್ದೇಶದಿಂದ ಯಾವುದೇ ಮಾನದಂಡವಿಲ್ಲದೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ತೇರ್ಗಡೆಯಾದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಗೌರವ ಸನ್ಮಾನ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ನಗರ ಘಟಕ ಅಧ್ಯಕ್ಷರಾದ ಬಂದಪ್ಪ ಅರಳಿ, ವಿಶ್ವರಾಧ್ಯ ಪ್ರೆಸ್ನ ಮಾಲೀಕರಾದ ಸಿದ್ದು ಪಾಟೀಲ, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಕಲಾಲ, ಉಪಾಧ್ಯಕ್ಷರಾದ ರಾಜು ನಲ್ಲಿಕರ್, ಕಾರ್ಯದರ್ಶಿ ಸೈಯದ್ ಸಾಜೀದ್ ಹಯಾತ್, ಸಿದ್ದಪ್ಪ ಲಿಂಗೇರಿ, ತಾಲೂಕು ಅಧ್ಯಕ್ಷರುಗಳಾದ ಮಲ್ಲಿಕಾರ್ಜುನ ಮುದ್ನೂರ, ಭೀಮಶೇನರಾವ್ ಕುಲಕರ್ಣಿ ಸೇರಿದಂತೆ ಇತರರಿದ್ದರು.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಒಟ್ಟು 8 ವಿದ್ಯಾರ್ಥಿಗಳಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಲಾ 5 ಸಾವಿರ ರೂ. ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಿ ಅವರಿಗೆ ಗೌರವಿಸಲಾಯಿತು. ಇದೇ ವೇಳೆ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಕೂಡ ಮಕ್ಕಳಿಗೆ ತಮ್ಮ ವತಿಯಿಂದ ತಲಾ 2 ಸಾವಿರ ನಗದು ಪುರಸ್ಕಾನ ನೀಡಿ ಗೌರವಿಸಿದರು.
