ಜಿಲ್ಲಾಡಳಿತದಿಂದ ಶ್ರೀಸವಿತಾ ಮಹರ್ಷಿ ಜಯಂತಿ |ಸವಿತಾ ಮಹರ್ಷಿಗಳ ಆದರ್ಶ ಮೈಗೂಡಿಸಿಕೊಳ್ಳಿಲು ತುನ್ನೂರ ಕರೆ
ಯಾದಗಿರಿ: ಸವಿತಾ ಮಹರ್ಷಿಗಳ ಆದರ್ಶಗಳು ಸಮಾಜ ಮುಖಿಯಾಗಿ ಎಲ್ಲರಿಗೆ ದಾರಿದೀಪವಾಗಿದ್ದು, ಯುವ ಸಮುದಾಯ ಅವರ ತತ್ವ ಆದರ್ಶ, ಆಚಾರ- ವಿಚಾರಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ರಾದ ಶ್ರೀ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಕರೆ ನೀಡಿದರು.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರ ಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿವಿಧ ಜಯಂತಿಗಳನ್ನು ಆಚರಿಸಲು ಅವಕಾಶ ನೀಡುವ ಮೂಲಕ ಸರ್ಕಾರವು ಮಹಾತ್ಮರ ಆದರ್ಶಗಳ ದಾರಿಯಲ್ಲಿ ನಡೆಯಲು ಪ್ರೋತ್ಸಾಹ ನೀಡಿದೆ. ಸಮಾಜದಲ್ಲಿನ ಯುವ ಜನಾಂಗ ಸವಿತಾ ಮಹರ್ಷಿಗಳ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಆರ್ಥಿಕವಾಗಿ, ಸಾಮಾಜಿಕ, ಶೈಕ್ಷಣಿಕವಾಗಿ ಮುಂಚೂಣಿಗೆ ಬರುವಂತೆ ಕರೆ ನೀಡಿದರು.
ಸಹಾಯಕ ಉಪನ್ಯಾಸಕರಾದ ಪಿ.ವಿ. ವೆಂಕಟಾಚಲಪತಿ ಅವರು ಉಪನ್ಯಾಸ ನೀಡಿ, ಸವಿತಾ ಸಮಾಜವು ಸಮಾಜದಲ್ಲಿ ವಿಶಿಷ್ಟ ಇತಿಹಾಸ ಹೊಂದಿದೆ. ಶಿವನ ದಿವ್ಯದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿಯವರು ಪುರಾಣ ಗ್ರಂಥದಲ್ಲಿ ತಮ್ಮದೇ ಆದ ಸ್ಥಾನ ಹೊಂದಿದ್ದಾರೆ. ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗಪುರುಷರಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿಯನ್ನು ಆಚರಿಸಲು ಅವಕಾಶ ಮಾಡಿಕೊಡುವ ಮೂಲಕ ಸರ್ಕಾರ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ಬೆಳಕು ತೋರಿಸಿದೆ ಎಂದು ಹೇಳಿ ಸವಿತಾ ಸಮಾಜದವರು ಮಹರ್ಷಿಗಳ ಬದುಕಿನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದರು.
ಇದೇ ಸಂದರ್ಭದಲ್ಲಿ ಯಾದಗಿರಿ ನಗರಸಭೆ ಅಧ್ಯಕ್ಷೆ ಕು. ಲಲಿತ ಅನಪುರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ್ ಮಾಲಿ ಪಾಟೀಲ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಉತ್ತರಾದೇವಿ. ಮಠಪತಿ, ಸವಿತಾ ಸಮಾಜದ ಮುಖಂಡರಾದ ಮಲ್ಲಣ್ಣ ವಡಗೇರಾ ಹಾಗೂ ಸಮಾಜದ ಮುಖಂಡರು ಮತ್ತು ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಇದ್ದರು.
