ಯಾದಗಿರಿ : ಜಿಲ್ಲೆಯ ವಡಗೇರ ತಾಲೂಕಿನ ತೇಕಳಾರ್ ಗ್ರಾಮದ ಸುಮಾರು 20 ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದೆ ವಿದ್ಯಾಭ್ಯಾಸಕ್ಕಾಗಿ ತೇಕಳಾರ್ ಗ್ರಾಮದಿಂದ ಸುಮಾರು ನಾಲ್ಕೈದು ಕಿ ಮೀ ದೂರದ ಕುರಕುಂದ ಗ್ರಾಮದ ಸರಕಾರಿ ಪ್ರೌಢಶಾಲೆಗೆ ದಿನನಿತ್ಯ ಕಾಲುನಡಿಗೆಯಲ್ಲಿ ಹೋಗುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ ಎಂದು ಮಲ್ಲು ಹಲಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಭ್ಯಾಸದಲ್ಲಿ ಕುಂಠಿತವಾಗುತ್ತಿದೆ. ಶಾಲಾ ಸಮಯ ಬೆಳಿಗ್ಗೆ 10:00 ಗಂಟೆ ಸಾಯಂಕಾಲ 4:30 ಗಂಟೆ ಇದರಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಹೆಚ್ಚುವರಿ ತರಗತಿ ಬೆಳಿಗ್ಗೆ 9:00 ಗಂಟೆ ಪ್ರಾರಂಭವಾಗುತ್ತದೆ. ಸಾಯಂಕಾಲ ಒಂದು ತಾಸು ಹೆಚ್ಚುವರಿ ತರಗತಿಯಿದೆ. ಈ ಸಂಬಂಧ ತಕ್ಷಣ ಮೇಲಧಿಕಾರಿಗಳು ಕುರಕುಂದ ಸರ್ಕಾರಿ ಪ್ರೌಢ ಶಾಲೆಗೆ ಹೋಗಲು ತೇಕಳಾರ್ ಗ್ರಾಮದಲ್ಲಿ ಬೆಳಗ್ಗೆ 8:30 ಗಂಟೆಗೆ ಬಸ್ ಸೌಲಭ್ಯ ಒದಗಿಸಬೇಕು.
ಶಾಲೆ ಬಿಡುವ ಸಮಯ ಕುರುಕುಂದ ಗ್ರಾಮದಿಂದ ಸಾಯಂಕಾಲ 5:30 ಗಂಟೆಗೆ ಬಸ್ ಸೌಲಭ್ಯ ಒದಗಿಸಬೇಕು ಎಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಎಸ್ಸಿ ವಿಭಾಗ ಸಂ. ಕಾರ್ಯದರ್ಶಿ ಮಲ್ಲು ಹಲಗಿ ಕುರಕುಂದ, ಹಣಮಂತ ಮಾಲಹಳ್ಳಿ, ಮರಿಲಿಂಗ ಹೊರಟೂರ್, ಸುರೇಶ್ ಹಾಲಗೇರಿ, ಹನುಮಂತ ವಡ್ಕರ್, ಜೀವಲಪ್ಪ ಬೆಂಡೆಗಂಬಳಿ, ಶಿವಶರಣಪ್ಪ ಗೋನಲ್, ದೇವು ಕುರಿಹಾಳ ಅವರು ಮನವಿ ಮಾಡಿದ್ದಾರೆ.
