500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾದ ಭವ್ಯ ಶ್ರೀರಾಮ ಮಂದಿರ | ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆರ್ ಎಸ್ ಎಸ್ ಸರಸಂಘಚಾಲಕ ಡಾ.ಭಾಗವತ್ ಭಾಗಿ
ಅಯೋಧ್ಯಾ : ಭವ್ಯ ಸನಾತನ ಧರ್ಮದ ಪ್ರೇರಣೆಯಾದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಭವ್ಯ ಮಂದಿರ ಮೇಲೆ ಇಂದು ನ.25 ರಂದು ಧರ್ಮಧ್ವಜ ಹಾರಾಡಲಿದೆ.
ಸುಮಾರು 500 ವರ್ಷಗಳ ನಿರಂತರ ಹೋರಾಟದ ಬಳಿಕ ನಿರ್ಮಾಣವಾದ ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಮಂದಿರದ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ್ ಜಿ ಅವರು ಧ್ವಜ ಆರೋಹಣ ಮಾಡಲಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸನಾತನ ಪರಂಪರೆಯ ಭವ್ಯ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮಧ್ಯಾಹ್ನ ಸುಮಾರು 12 ಗಂಟೆಗೆ ಧ್ವಜ ಆರೋಹಣ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಪ್ರಧಾನ ಮಂತ್ರಿಗಳು ವಿವಿಧ ದೇವಾಲಯಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆಯಲಿದ್ದಾರೆ.
10 ಅಡಿ ಎತ್ತರ 20 ಅಡಿ ಉದ್ದದ ಧ್ವಜ : ಸಾಂಪ್ರದಾಯಿಕ ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯದ ಶಿಖರದ ಮೇಲೆ 10 ಅಡಿ ಎತ್ತರ, 20 ಅಡಿ ಉದ್ದದ ಧ್ವಜ ಹಾರಾಡಲಿದೆ.
ದೇವಾಲಯ ಸುತ್ತಲೂ ದಕ್ಷಿಣ ಭಾರತದ ವಾಸ್ತುಶಿಲ್ಪದಲ್ಲಿ ರಚಿಸಲಾದ 800 ಮೀಟರ್ ಆವರಣವಿದ್ದು, ಭಾರತದ ಶ್ರೀಮಂತ ವಾಸ್ತುಶಿಲ್ಪ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಮುಖ್ಯ ದೇವಾಲಯದ ಹೊರ ಗೋಡೆಗಳು ವಾಲ್ಮೀಕಿ ರಾಮಾಯಣವನ್ನು ಆಧರಿಸಿದ ಭಗವಾನ್ ಶ್ರೀರಾಮನ ಜೀವನ ಚಿತ್ರಿಸುವ 87 ಕೆತ್ತಿದ ಕಲ್ಲಿನ ಫಲಕ ಪ್ರದರ್ಶಿಸುತ್ತವೆ, ಪರಿಧಿಯಲ್ಲಿರುವ 79 ಕಂಚಿನ ಫಲಕಗಳು ಭಾರತದ ಸಾಂಸ್ಕೃತಿ, ಸಂಪ್ರದಾಯಗಳ ದೃಶ್ಯಗಳನ್ನು ವಿವರಿಸುತ್ತವೆ.
