ಬೀದರ: ಬೀದರ್ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳ ಪ್ರತಿಭೆಗಳು ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಕಂಗೊಳಿಸಿವೆ. ಬೀದರ್ ಜಿಲ್ಲೆಯ ಆದರ್ಶ ವಿದ್ಯಾಲಯ ಜನವಾಡ ಶಾಲೆಯ ವಿದ್ಯಾರ್ಥಿನಿಯರಾದ ಶ್ರೇಯಾ ಮತ್ತು ಸುಕೃತಿ ಇವರಿಂದ ವಿನ್ಯಾಸಗೊಂಡ “Hydrophonic Forming” ಹಾಗೂ ಆದಿತ್ಯ ಮತ್ತು ಶ್ರೇಯಸ್ ಇವರಿಂದ ನಿರ್ಮಿತವಾದ “EDU KIOSK” ಎಂಬ ನವೀನ ಮಾದರಿಗಳು Global Innovation Challenge ನ Finalist (ಅಂತಿಮ ಹಂತ) ಗೆ ಆಯ್ಕೆಯಾಗಿದ್ದು, ಮಹತ್ತರ ಸಾಧನೆಯಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದರು.
ವಿದ್ಯಾರ್ಥಿಗಳ ಸಾಧನೆಗೆ ಕರ್ನಾಟಕ ಸರ್ಕಾರ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ನಡೆಯುತ್ತಿರುವ ಅಗಸ್ತ್ಯ ವಿಜ್ಞಾನ ಚಟುವಟಿಕೆ ಕೇಂದ್ರ ಸ್ಪೂರ್ತಿಯಾಗಿದೆ. ಈ ಆಯ್ಕೆ ಮೂಲಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ CBSE ಶಾಲೆಗಳೊಂದಿಗೆ ಸಮಾನ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ. ಸರ್ಕಾರಿ ಶಾಲೆಗಳ ಪೈಕಿ ವಿದ್ಯಾರ್ಥಿಗಳ ಯೋಜನೆಗಳು ಅಂತಿಮ ಹಂತ ಪ್ರವೇಶಿಸಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.
ಈ ಯಶಸ್ಸಿನ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ ಅವರು ಈ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ (Certificate) ನೀಡಿ ಗೌರವಿಸಿದರು. ಬೀದರ್ ಆದರ್ಶ ವಿದ್ಯಾಲಯ ಜನವಾಡ ವಿದ್ಯಾರ್ಥಿಗಳು ಈ ಹಂತ ತಲುಪಿರುವುದು ಉತ್ತರ ಕರ್ನಾಟಕದ ಸೃಜನಶೀಲತೆ ಮತ್ತು ವೈಜ್ಞಾನಿಕ ಚಾತುರ್ಯವನ್ನು ವಿಶ್ವಮಟ್ಟದಲ್ಲಿ ಪ್ರತಿಷ್ಠಾಪಿಸಿದೆ.
ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳು, ಪೋಷಕರು, ಅಗಸ್ತ್ಯ ಫೌಂಡೇಶನ್ನ ಮುಖ್ಯಸ್ಥ ಬಾಬುರಾವ್ ಸಲಸರೆ, ಶಾಲೆಯ ವಿಜ್ಞಾನ ಶಿಕ್ಷಕಿ ಕೃಷ್ಣವೇಣಿ ಹಾಗೂ ಅಗಸ್ತ್ಯ ವಿಜ್ಞಾನ ಕೇಂದ್ರದ ಮಾರ್ಗದರ್ಶಕ ಆಕಾಶ ಪಾಟೀಲ್ ಅವರಿಗೆ ಅಭಿನಂದನೆ ತಿಳಿಸಿ, ನಿಮ್ಮ ಸಾಧನೆಯು ಕರ್ನಾಟಕವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಶ್ಲಾಘಿಸಿದರು.
