ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ
ಯಾದಗಿರಿ: 36 ಜನ ಪತ್ರಕರ್ತರಿಗೆ 30×40 ಅಳತೆಯ ನಿವೇಶನ ಮಂಜೂರಾತಿಗೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮತ್ತು ಉಪಾಧ್ಯಕ್ಷೆ ಹಾಗೂ ಪೌರಾಯುಕ್ತ ಸೇರಿದಂತೆ ಹಲವರಿಗೆ ಸನ್ಮಾನಿಸಲಾಯಿತು.
ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರೂ ಪತ್ರಕರ್ತರಿಗೆ ನಿವೇಶನ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮಾತನಾಡಿ, ಸಮಾಜಕ್ಕೆ ಪತ್ರಕರ್ತರ ಸೇವೆ ಅಮೋಘವಾಗಿದೆ. ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಾರೆ. ನಿಜಕ್ಕೂ ಇದು ಮರೆಯಲು ಸಾಧ್ಯವಿಲ್ಲ ಎಂದರು.
ಹಲವಾರು ವರ್ಷಗಳ ಕಾಲ ಜಿಲ್ಲಾ ಕೇಂದ್ರದಲ್ಲಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಯನ್ನು ಮನಗಂಡು ನಿವೇಶನ ನೀಡಲಾಗುತ್ತದೆ. ಬಹು ದಿನಗಳ ನಿವೇಶನದ ಬೇಡಿಕೆ ಈಡೇರುವ ಕಾಲ ಇದೀಗ ಕೂಡಿ ಬಂದಿದೆ ಎಂದು ಹೇಳಿದರು.
ನಿವೇಶನ ಮಂಜೂರಾತಿಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚುರುಕಿನಿಂದ ಕೆಲಸ ಮಾಡುವ ಮೂಲಕ ಪತ್ರಕರ್ತರ ಹೆಸರಿಗೆ ನೋಂದಣಿ ಮಾಡಿಸಲು ಅಗತ್ಯವಾದ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 36 ನಿವೇಶನ ನೀಡಲು ಅನುಮೋದನೆ ನೀಡುವ ಮೂಲಕ ಪತ್ರಕರ್ತರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು.
ಶೀಘ್ರದಲ್ಲಿ ಎಲ್ಲ ಪತ್ರಕರ್ತರ ಹೆಸರಿಗೆ ನಿವೇಶನ ನೋಂದಣಿ ಮಾಡಿಸಲು ನಗರಸಭೆ ಮುಂದಿನ ಕ್ರಮಕೈಗೊಳ್ಳಲು ತುರ್ತಾಗಿ ಮುಂದಾಗಬೇಕು ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷೆ ರುಖಿಯಾ ಬೇಗಂ, ಪೌರಾಯುಕ್ತ ಉಮೇಶ್ ಜಾಧವ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಜನಿಕಾಂತ್ ಅವರಿಗೆ ಸನ್ಮಾನಿಸಲಾಯಿತು.
ನಗರಸಭೆ ಸದಸ್ಯರಾದ ಚನ್ನಕೇಶವಗೌಡ ಬಾಣತಿಹಾಳ, ಹಣಮಂತ ನಾಯಕ, ವಿಲಾಸ್ ಪಾಟೀಲ್, ಸ್ವಾಮಿದೇವ ದಾಸನಕೇರಿ, ಅಂಬಯ್ಯ ಶಾಬಾದಿ, ಮಂಜುನಾಥ ದಾಸನಕೇರಿ, ಹಣಮಂತ ಇಟಗಿ, ಗಣೇಶ್ ದುಪ್ಪಲ್ಲಿ, ಸದಸ್ಯೆಯರಾದ ಮಹಾದೇವಮ್ಮ ಬೀರನೂರ, ಪ್ರಭಾವತಿ ಕಲಾಲ್, ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಉಪಾಧ್ಯಕ್ಷ ರಾಜು ನಲ್ಲಿಕರ್, ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ ಸೇರಿದಂತೆ ಪತ್ರಕರ್ತರು ಇದ್ದರು.
