ಗಡಿಯಲ್ಲಿ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ | ನೋಡುಗರ ಕಣ್ಮನ ಸೆಳೆದ ಕಲಾ ತಂಡಗಳ ನೃತ್ಯ | ಕನ್ನಡ ಗೀತೆಗಳಿಗೆ ಯುವಕರಿಂದ ಹೆಜ್ಜೆ
ಗುರುಮಠಕಲ್: ರಾಜ್ಯದ ಗಡಿ ತಾಲೂಕಿನಲ್ಲಿ 70ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ನೆರವೇರಿತು. ಇಲ್ಲಿನ ಸಾರ್ವಜನಿಕ ಧ್ವಜಾರೋಹಣ ಆಚರಣಾ ಸಮಿತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶಾಂತಗೌಡ ಬಿರಾದಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ವಿಶೇಷ ಉಪನ್ಯಾಸ ನೀಡಿದ ಶರಣಪ್ಪ ಚಿಂತಕುಂಟಾ, ಕನ್ನಡದ ಹಿರಿಮೆಯನ್ನು ಕೊಂಡಾಡಿದರು. ಕವಿರಾಜ ಮಾರ್ಗದ ಸಾಲುಗಳ ವಿಶ್ಲೇಷಣೆ ಮಾಡಿ ಕವಿಗಳು ವರ್ಣಿಸಿದ ಪರಿ ವಿವರಿಸಿದರು.
ಕನ್ನಡಿಗರು ರಾಷ್ಟ್ರ ರಕ್ಷಣೆಗೆ ಯಾವಾಗಲೂ ಮುಂದು ಎಂದವರು, ಕನ್ನಡ ಸ್ವಾತಂತ್ರ್ಯ ಹೋರಾಟಗಾರ ಕುರಿತು ವಿವರಿಸಿದರು. ಜಾನಪದದಲ್ಲಿ ಪುಣ್ಯಕೋಟಿ ಗೀತೆಯಲ್ಲಿ ಮೂಕ ಪ್ರಾಣಿಯ ಪ್ರಾಮಾಣಿಕತೆಯನ್ನು ಬರೆದ ಕವಿ ಜೆ.ಪಿ. ರಾಜರತ್ನಂ ಕನ್ನಡದ ಅಭಿಮಾನ ಕುರಿತು ಮೆಲುಕು ಹಾಕಿದರು.
ಕ್ರೀಡಾಂಗಣದಿಂದ ಬಾಲಕೀಯರ ಪಿಯು ಕಾಲೇಜು ಮೈದಾನ ವರೆಗೆ ಮುಖ್ಯ ಬೀದಿಗಳ ಮೂಲಕ ನಡೆದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೋಡುಗರನ್ನು ಸೆಳೆಯಿತು. ಈ ವೇಳೆ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಪುರಸಭೆ ಅಧ್ಯಕ್ಷೆ ಜಯಶ್ರೀ ಆರ್ ಪಾಟೀಲ್, ತಾ.ಪಂ.ಇಓ ಅಂಬ್ರೇಷ ಪಾಟೀಲ್, ಸಿಪಿಐ ವೀರಣ್ಣ ಎಸ್ ದೊಡ್ಡಮನಿ, ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ, ಸಿಡಿಪಿಓ ಶರಣಬಸಪ್ಪ, ಗ್ರೇಡ್ 2 ತಹಸೀಲ್ದಾರ ನರಸಿಂಹ ಮೂರ್ತಿ, ಕಸಾಪ ಅಧ್ಯಕ್ಷ ಬಸರೆಡ್ಡಿ ಎಂ.ಟಿ.ಪಲ್ಲಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.
ಪುರಸಭೆ ಕಾರ್ಯಾಲಯ: ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷೆ ಜಯಶ್ರೀ ಆರ್ ಪಾಟೀಲ್ ಅವರು ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಮಾತನಾಡಿ, ಕನ್ನಡಿಗರಿಗೆ ಹಬ್ಬದ ವಾತಾವರಣ, 1956 ನ.1ರಂದು ಭಾಷಾ ಆಧಾರದಲ್ಲಿ ವಿಂಗಡನೆಯಾಯಿತು.ಹಾಗಾಗಿ ನ.1 ರಾಜ್ಯೋತ್ಸವ ಆಚರಣೆಗೆ ಬಂತು, ಕನ್ನಡವನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಸದಸ್ಯ ಬಾಲಪ್ಪ ದಾಸರಿ, ನರಸಪ್ಪ ಗಡ್ಡಲ್, ರಾಮುಲು, ರವಿ ಪಾಟೀಲ್, ಅಂಬಾದಾಸ ಜೀತ್ರಿ, ಸೈಯದ್ ಬಾಬಾ, ನರಸಪ್ಪ ಲಿಕ್ಕಿ, ಅಶೋಕ ಶನಿವಾರಂ, ಸೈಯದ್ ಬಾಬಾ, ಸಿಬ್ಬಂದಿಗಳಾದ ವ್ಯವಸ್ಥಾಪಕ ಮಲ್ಲಿಕಾರ್ಜುನ, ರಾಮುಲು, ಅಶೋಕ, ವೀರಭದ್ರಪ್ಪ, ಅಂಜಪ್ಪ, ಶ್ರೀನಿವಾಸ ಗೊಂಗಲೆ, ರಾಕೇಶ ಧಡಂಗೆ ಇತರರು ಇದ್ದರು.
