ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ಸಮಾರಂಭ | ಸರ್ಕಾರದ ಯೋಜನೆಗಳ ಲಾಭ ಪಡೆಯಿರಿ
ಗುರುಮಠಕಲ್: ಒಂದು ಕಡೆಯಿಂದ ಇನ್ನೊಂದು ಕಡೆಗೆ ಕುರಿಗಳನ್ನು ಮೇಯಿಸಲು ಹೋಗುವ ಜನರು ಸುರಕ್ಷತೆ ಮತ್ತು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗಿದ್ದು, ಕಡ್ಡಾಯವಾಗಿ ಚೀಟಿ ಜೊತೆಯಲ್ಲಿ ಇರಿಸಿಕೊಳ್ಳಲು ಶಾಸಕ ಶರಣಗೌಡ ಕಂದಕೂರ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರ ಕಾರ್ಯಾಲಯ ಸಭಾಂಗಣದಲ್ಲಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೆಲ ಕಡೆ ಪ್ರಭಾವ ಬೀರಿ ಬಂದೂಕು ಪಡೆಯುವ ಯತ್ನ ನಡೆದಿದೆ. ಯೋಜನೆಯಿಂದ ದುರುಪಯೋಗವಾಗುವ ಕುರಿತು ಅಧಿಕಾರಿಗಳು ಗಮನ ಹರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಪಶು ವೈದ್ಯರು ಆಸ್ಪತ್ರೆಯಲ್ಲಿದ್ದು ಸರಿಯಾಗಿ ಕಾರ್ಯ ನಿರ್ವಹಿಸಲು ಸೂಚನೆ ನೀಡಲು ಮೇಲಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಾನವೀಯತೆ ಆಧಾರದ ಮೇಲೆ ಒಳ್ಳೆಯ ಸೇವೆ ನೀಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಶು ಸಂಗೋಪನಾ ಇಲಾಖೆ ಕಾರ್ಯಕ್ರಮಗಳ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಈ ಭಾಗದ ಜನರಿಗೆ ತಲುಪಿಸುವ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರು ಮಾತನಾಡಿ, ಕುರಿಗಳನ್ನು ತೋಳ ಭೇಟೆ ಇತರೆ ಅವಘಡ ಸಂಭವಿಸಿದಾಗ ಗುರುತಿನ ಚೀಟಿ ಸಾಕಷ್ಟು ಸಹಾಯವಾಗಲಿದೆ.
ಕುರಿಗಾಹಿಗಳಿಗೆ ಬಂದೂಕು ಕೊಡುವ ಯೋಜನೆಯೂ ಇದೆ ಎಂದು ವಿವರಿಸಿದರು. ಕುರಿ ಸತ್ತರೆ 15 ಸಾವಿರ ಪರಿಹಾರ, ಮರಿಗೆ 5 ಸಾವಿರ ಪರಿಹಾರ ವಿತರಣೆ ಮಾಡಲಾಗುತ್ತದೆ. ಆ ವೇಳೆ ಮರಣೋತ್ತರ ಪರೀಕ್ಷೆ ಕಡ್ಡಾಯವಾಗಿದೆ.
ಕುರಿಗಾಹಿಗಳು ಇಲಾಖೆಯ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದರು. ಈ ವೇಳೆ ಯಾದಗಿರಿ, ಗುರುಮಠಕಲ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ರೈತರು ಇದ್ದರು.
