ಬಿಜೆಪಿಯಲ್ಲಿ ತಾರಕಕ್ಕೇರಿದ ಬಣ ಗುದ್ದಾಟ | ಪಕ್ಷಕ್ಕಾಗುತ್ತಿರುವ ಮುಜುಗರ ತಪ್ಪಿಸಲು ಹೈಕಮಾಂಡ್ ಕೈಗೊಳ್ಳತ್ತ ನಿರ್ಧಾರ..?
ಬೆಂಗಳೂರು : ಕೆಲ ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ವಿಷಯ ಜಗಜ್ಜಾಹೀರಾಗಿದೆ.
ರಾಜ್ಯ ಬಿಜೆಪಿಯಲ್ಲಿ ನಾಯಕರ ಭಿನ್ನಮತ ತಾರಕಕೇರಿದ್ದು, ಯತ್ನಾಳ್ ಟೀಮ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬೆಂಬಲಿಗರ ಟಾಕ್ ವಾರ್ ತಡೆಯಿಲ್ಲದೇ ಸಾಗಿದೆ. ಇದರಿಂದಾಗಿ ತಳಮಟ್ಟದ ಕಾರ್ಯಕರ್ತರು ಮುಜುಗರ ಅನುಭವಿಸುವಂತಾಗಿದೆ.
ಈ ಮಧ್ಯೆ ಬಿಜೆಪಿಯಲ್ಲೇ ಹಿಂದೂ ಫೈಯರ್ ಬ್ರಾಂಡ್ ಶಾಸಕ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಅವರನ್ನು ಕಟ್ಟಿಹಾಕಲು ತಂತ್ರಗಾರಿಕೆ ನಡೆಯುತ್ತಿದೆಯೇ ಎನ್ನುವ ರಾಜಕೀಯ ವಿಶ್ಲೇಷಣೆಗಳು ಹುಟ್ಟುಕೊಳ್ಳುತ್ತಿವೆ.
ಯತ್ನಾಳ್ ಅವರು ಈ ಹಿಂದೆ ರಾಜ್ಯದಲ್ಲಿ ವಕ್ಫ್ ವಿರುದ್ಧ ಹೋರಾಟ ರೂಪಿಸಿದ್ದಕ್ಕೆ ಸ್ವತಃ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿ ಹಲವರು ಬೆಂಬಲಿಸಿ ವಿಜಯಪುರದಲ್ಲಿ ಹೋರಾಟದಲ್ಲಿ ಭಾಗವಹಿಸಿದ್ದರು. ಇದಕ್ಕೆ ರೈತರು, ಮಠಾಧೀಶರೂ ಸಾಥ್ ನೀಡಿದ್ದರು.
ಈ ವಿಚಾರವಾಗಿಯೇ ರಾಜ್ಯಾಧ್ಯಕ್ಷರು ಆಡಳಿತ ಪಕ್ಷದ ವಿರುದ್ಧ ಹೋರಾಟ ರೂಪಿಸುವಲ್ಲಿ ಎಡವಿದ್ದಾರೆ ಎನ್ನುವ ಸಂದೇಶ ಹೈಕಮಾಂಡ್ ಗೆ ತಲುಪಿಸಲು ಹೊರಟಿದ್ದರಾ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.

ಇನ್ನೊಂದೆಡೆ ಬಸವಣ್ಣರ ಬಗ್ಗೆ ಹೇಳಿಕೆ ವಿಚಾರವು ಯತ್ನಾಳ್ ವಿರುದ್ಧ ಜ್ವಾಲೆ ಎಬ್ಬಿಸಿದೆ. ಯತ್ನಾಳ್ ಹೇಳಿಕೆ ಖಂಡಿಸಿ, ಬಸವಕಲ್ಯಾಣ ಶಾಸಕ ಶರಣು ಸಲಗರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬಸವನಗೌಡ ಆರ್ ಪಾಟೀಲ ರವರು ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಪದವನ್ನು ಬಳಸಿರುವುದರಿಂದ ಈ ನೆಲದ ಶಾಸಕ ಸೇವಕನಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಇದರಿಂದ ಸಮಸ್ತ ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಸಮಾಜದ ಬಸವಾಭಿಮಾನಿಗಳಿಗೆ ನೋವುಂಟು ಮಾಡಿದೆ. ಕೂಡಲೇ ಬಸವನಗೌಡ ಆರ್ ಪಾಟೀಲ ರವರು ಕ್ಷಮೆಯನ್ನು ಕೆಳಬೇಕು. ಇಲ್ಲದಿದ್ದಲ್ಲಿ ಈ ನೆಲದ ಶಾಸಕನಾಗಿ ತಮ್ಮ ವಿರುದ್ಧ ಹೊರಾಟ ಮಾಡಬೇಕಾಗುತ್ತದೆ ಎಂದಿದ್ದಾರೆ.
ಕಲಬುರಗಿಯಲ್ಲಿಯೂ ಯತ್ನಾಳ್ ಹೇಳಿಕೆ ಖಂಡಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆದಿದೆ. ಬಾಗಲಕೋಟೆ ವಕ್ಫ್ ಹೋರಾಟದ ವೇಳೆ ಜಾತಿ ವಾಚಕ ಪದ ಬಳಸಿದ್ದು ವಿರೋಧಿಸಿರುವ ಸಮಾಜದ ಮುಖಂಡರು ಬಹಿರಂಗ ಕ್ಷಮೆ ಯಾಚಿಸಲು ಆಗ್ರಹಿಸಿದ್ದಾರೆ.
ಈ ಎಲ್ಲಾ ಗೊಂದಲ, ವಿರೋಧಗಳು ಯಾವ ಹಂತಕ್ಕೆ ಬಂದು ತಲುಪುತ್ತವೋ ಕಾದು ನೋಡಬೇಕಿದೆ. ಹೈಕಮಾಂಡ್ ಭಿನ್ನಮತ ಶಮನಗೊಳಿಸುವ ನಿಟ್ಟಿನಲ್ಲಿ ಯಾವ ರೀತಿ ಪರಿಸ್ಥಿತಿ ನಿಭಾಯಿಸುತ್ತದೊ ನೋಡಬೇಕಿದೆ.
ಯತ್ನಾಳ್ ನೋಟಿಸ್ ವಿಚಾರ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ: ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಹೋರಾಟ ಮಾಡದೇ ಇರುವುದರಿಂದ ಪಕ್ಷದ ದೃಷ್ಟಿಯಿಂದ ನಾವು ಹೋರಾಟ ಮಾಡಿದೆವು.
ನೋಟಿಸ್ ಕೊಡುವ ವಿಚಾರ 2 ದಿನ ಹಿಂದೆಯೇ ಗೊತ್ತಿತ್ತು, ಯತ್ನಾಳ್ ಸಮರ್ಪಕ ಉತ್ತರ ಕೊಡುತ್ತಾರೆ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಕೆಜೆಪಿ ಟೀಮ್ ಇದೆ. ಅವರ ಪರ ಮಾತಾಡ್ತಾರೆ, ಬಿಜೆಪಿ ಅವರು ಯಾರು ಮಾತನಾಡಿಲ್ಲ ಎಂದು ಹೇಳಿದ್ದಾರೆ. ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್ ಗೆ ಮನವಿ ಮಾಡುವುದಾಗಿ ದೆಹಲಿಯಲ್ಲಿ ಹೇಳಿದ್ದಾರೆ.
