ಅಮಾಯಕ ಅಲೆಮಾರಿ ಸಮುದಾಯದ ಯುವತಿಯರ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ | ನಾಗರೀಕ ಸಮಾಜವೇ ತಲೆತಗ್ಗಿಸುವ ಘಟನೆ
ಗುರುಮಠಕಲ್: ಪಟ್ಟಣದ ಇಂದಿರಾನಗರದ ಇಬ್ಬರು ಬಾಲಕಿಯರು ಚಿಂದಿ ಆಯಲು ಯಾದಗಿರಿ ತಾಲೂಕಿನ ನೀಲಹಳ್ಳಿಗೆ ತೆರಳಿ ಅಲ್ಲಿನ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವಗಳಾಗಿ ಪತ್ತೆಯಾಗಿರುವುದು ಕೂಲಂಕುಷ ತನಿಖೆಯಾಗಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ನೀಲಾ ಅವರು ಆಗ್ರಹಿಸಿದ್ದಾರೆ.
ಗುರುಮಠಕಲ್ ಪಟ್ಟಣದ ಇಂದಿರಾನಗರದ ಮೃತ ಬಾಲಕಿಯರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳಿ ಮಾಧ್ಯಮದ ವರೊಂದಿಗೆ ಮಾತನಾಡಿದರು.
ಇದು ಸಹಜವಾದ ಸಾವು ಅಲ್ಲ. ಮೃತ ಯುವತಿಯರ ದೇಹದ ಮೇಲೆ ಗಾಯಗಳು ಕಂಡು ಬಂದಿದೆ. ಮೂಗಿನಲ್ಲಿ ರಕ್ತ ಬಂದಿದೆ. ಇದೊಂದು ವ್ಯವಸ್ಥಿತ ಜೋಡಿ ಕೊಲೆಯಾಗಿದೆ. ಅತ್ಯಾಚಾರವೂ ನಡೆದಿರುವ ಸಾಧ್ಯತೆಗಳಿವೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.
ಇದರ ಬಗ್ಗೆ ಇನ್ನೊಂದು ಎಫ್ಐಆರ್ ದಾಖಲು ಮಾಡಬೇಕು, ಫೀಡ್ಸ್ ಬಂದು ನೀರಿನಲ್ಲಿ ಬಿದ್ದಿದ್ದಾಳೆ, ಅವಳನ್ನು ರಕ್ಷಿಸಲು ಹೋಗಿ ಇನ್ನೊಬ್ಬಳು ಸತ್ತಿದ್ದಾಳೆ ಎನ್ನುವಂತೆ ಬಿಂಬಿಸುವ ಕಾರ್ಯವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಅಮಾಯಕ ಬಾಲಕಿಯರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದು ನಾಗರೀಕ ಸಮಾಜವೇ ತಲೆತಗ್ಗಿಸುವ ಘಟನೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಗ್ಧ ಜನರ ಜೀವದ ಜೊತೆಯಾಗಿರುವ ಅನ್ಯಾಯ ಸಹಿಸಲಿಲ್ಲ. ಇದರ ಬಗ್ಗೆ ಸೈದಾಪುರ ಠಾಣೆ ಅಧಿಕಾರಿಗಳು ಹೊರತುಪಡಿಸಿ ಉನ್ನತ ಅಧಿಕಾರಿಗಳಿಂದ ಪ್ರಕರಣ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪೋಲಿಸರ ನಡೆ ಅನುಮಾನ ಮೂಡಿಸಿದೆ. ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು. ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಪ್ರಕರಣ ಘಟಿಸಿ ಈವರೆಗೆ ಒಬ್ಬರ ಬಂಧನವೂ ಆಗಿಲ್ಲ. ತೀವ್ರ ಖಂಡನೀಯ ಎಂದರು.
ಈ ವೇಳೆ ಡಿವೈಎಫ್ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ, ಪ್ರೀಯಾಂಕ ಮಾವಿನಕರ್, ಕೆಪಿಆರ್ ಎಸ್ ಚನ್ನಪ್ಪ ಆನೆಗುಂದಿ, ಜೆಎಂಎಸ್ ಪ್ರಮುಖರು, ಕೆಡಿಎಸ್ಎಸ್ ತಾಲೂಕು ಅಧ್ಯಕ್ಷ ಅಶೋಕ ಶನಿವಾರಂ, ರಿಯಾಜ್ ಅಹ್ಮದ್ ಇತರರು ಇದ್ದರು.
