ರಾಯಚೂರು: ಮಹಾನಗರ ಪಾಲಿಕೆ ಹಾಗೂ ಗ್ರೀನ್ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ‘ಸಿಟಿ ಫಾರ್ ಯುಥ್ – ಯುಥ್ ಫಾರ್ ಸಿಟಿ’ ಕಾರ್ಯಕ್ರಮದ ಭಾಗವಾಗಿ ನಗರದಲ್ಲಿ ‘ಉಚಿತ ಪರಿಸರ ಪ್ರೇಮಿ ಬೀಜವುಳ್ಳ ಮಣ್ಣಿನ ಗಣಪ ತಯಾರಿಕಾ ಕಾರ್ಯಾಗಾರ’ವನ್ನು ಹಮ್ಮಿಕೊಳ್ಳಲಾಗಿದ್ದು, ವಯಸ್ಸಿನ ಬೇಧವಿಲ್ಲದೇ ಎಲ್ಲರೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ.
ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಆ.24ರ (ರವಿವಾರ) ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಲಿರುವ ಕಾರ್ಯಾಗಾರದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಗ್ರೀನ್ ರಾಯಚೂರು ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಗಣ್ಯರನ್ನು ಒಳಗೊಂಡಂತೆ ಪರಿಸರ ಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಾಪಾತ್ರ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ರಸಾಯನಿಕಯುಕ್ತ ಬಣ್ಣಗಳಿಂದ ಮಾಡಿದ ಗಣಪ ಹಾಗೂ ಪಿಒಪಿ ಗಣಪನ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಇಂತಹ ಮೂರ್ತಿಗಳನ್ನು ಕೆರೆ-ಬಾವಿ-ನದಿನಗಳಿಗೆ ವಿಸರ್ಜಿಸುವುದರಿಂದ ನೀರು ವಿಷವಾಗಿ ಪರಿವರ್ತಿಸಿ ಜಲಚರಗಳಿಗೆ ಹಾನಿಯಾಗುತ್ತದೆ ಜೊತೆಗೆ ಆ ನೀರನ್ನು ಕುಡಿಯುವುದರಿಂದ ನಮಗೂ ಕ್ಯಾನ್ಸರ್’ನಂತಹ ಮಾರಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.
ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ಗಣಪನ ಮೂರ್ತಿಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರೀನ್ ರಾಯಚೂರು ಪ್ರತಿ ವರ್ಷ ಈ ಕಾರ್ಯಾಗಾರ ಹಮ್ಮಿಕೊಂಡು ಬಂದಿದ್ದು, ಮಹಾನಗರ ಪಾಲಿಕೆ ಈ ಬಾರಿ ನಮಗೆ ಕೈ ಜೋಡಿಸಿದ್ದು ತುಂಬಾ ಖುಷಿಯ ವಿಚಾರ. ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಇ-ಸರ್ಟಿಫಿಕೇಟ್ ನೀಡಲಾಗುತ್ತದೆ ಜೊತೆಗೆ ಒಂದು ಪರಿಸರ ಸ್ನೇಹಿ ಬಟ್ಟೆ ಚೀಲ ಹಾಗೂ ಸಸಿ ನೀಡಲಾಗುತ್ತದೆ ಎಂದು ಗ್ರೀನ್ ರಾಯಚೂರು ಸಂಸ್ಥೆಯ ಅಧ್ಯಕ್ಷೆ ಸರಸ್ವತಿ ಕಿಲಕಿಲೆ ಹಾಗೂ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಶಿವಾಳೆ ಮಾಹಿತಿ ನೀಡಿದ್ದಾರೆ.
