ಜ್ಞಾನ ವೃಕ್ಷ ನವೋದಯ ತರಬೇತಿ ಕೇಂದ್ರದಲ್ಲಿ |ಪಾಲಕರ ಸಭೆ ಮತ್ತು ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ | ನಿಜಗುಣಾನಂದ ಶ್ರೀ ಸಾನಿಧ್ಯ | ಮಕ್ಕಳಿಗಾಗಿ ಆಸ್ತಿಯಲ್ಲ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲು ಕರೆ
ಗುರುಮಠಕಲ್: ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗಬೇಕು, ಮಾನವೀಯತೆಯಿಂದ ಪರಸ್ಪರ ಪ್ರೀತಿಯಿಂದ ಜೀವನ ಸಾಗಿಸಬೇಕು. ಎಲ್ಲರ ರಕ್ತ ಒಂದೇ ಬಣ್ಣದ್ದಾಗಿದೆ. ಒಂದು ಜಾತಿಗೆ ಒಂದು ರಕ್ತದ ಬಣ್ಣ ಇಲ್ಲ. ನೀರು, ಗಾಳಿ, ಸೂರ್ಯ ಒಂದೇ ಹೀಗಿರುವಾಗ ಮನುಷ್ಯರಲ್ಲಿ ಭೇದಭಾವ ಯಾಕೆ ಎಂದು ಪೂಜ್ಯ ನಿಜಗುಣಾನಂದ ಮಹಾಸ್ವಾಮಿಜಿ ನಿಶ್ಚಲ ಮಂಟಪ ಬೈಲೂರು ಅವರು ಹೇಳಿದರು.
ಶ್ರೀರಾಮ್ ಎಜ್ಯುಕೇಶನಲ್ ಡೆವಲಪ್ಮೆಂಟ್ ಟ್ರಸ್ಟ್ ನ ಜ್ಞಾನ ವೃಕ್ಷ ನವೋದಯ ತರಬೇತಿ ಕೇಂದ್ರದಲ್ಲಿ ಪಾಲಕರ ಸಭೆ ಮತ್ತು ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಾಥಮಿಕ ಶಿಕ್ಷಕರ ಜವಾಬ್ದಾರಿ ಸಾಕಷ್ಟಿದೆ. ಮಕ್ಕಳು ಪ್ರಕೃತಿಯಲ್ಲಿ ಹುಟ್ಟಿರುವ ಹೂವಿನಂತೆ, ಮನುಷ್ಯರಾಗಬೇಕು. ಶಿಕ್ಷಣ ಬದುಕಿನಲ್ಲಿ ಬದಲಾವಣೆಗೆ ಬೇಕಿದೆ ಎಂದರು.
ಜೀವನದಲ್ಲಿ 3 ಜನರು ಗಳಿಸಬೇಕು. ತಾಯಿ- ತಂದೆ, ಶಿಕ್ಷಕ, ಆಧ್ಯಾತ್ಮ ಗುರು ಸರಿಯಾಗಿದ್ದರೆ ಜೀವನದಲ್ಲಿ ಸಾಧನೆ ಮಾಡಬಹುದು ಎಂದು ಕಿವಿ ಮಾತು ಹೇಳಿದರು. ತಂದೆ ತಾಯಿ ದೊಡ್ಡವನಾಗಲಿ ಎಂದು ಕಲಿಸುತ್ತಿದ್ದಾರೆ. ದೊಡ್ಡವನಾಗಿ ಮಗ ತಂದೆ ತಾಯಿಗಳನ್ನು ನೋಡುತ್ತಿಲ್ಲ. ಸಂಸ್ಕಾರ, ಸಂಸ್ಕೃತಿ ಸಿಗುತ್ತಿಲ್ಲ. ಅವಿಭಕ್ತ ಕುಟುಂಬ ಕಳೆದುಕೊಂಡಿರುವುದು ರಿಂದ ಈ ರೀತಿ ಆಗಿದೆ. ಮಾತೃ ದೇವೋಭವ ಎನ್ನುವ ದೇಶದಲ್ಲಿ ವೃದ್ಧಾಶ್ರಮ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬುದ್ಧ, ಬಸವ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಪೇರಿಯಾರ್ ರಂತ ಮಹನೀಯರ ಆದರ್ಶ ಅಳವಡಿಸಿಕೊಳ್ಳಲು ಹೇಳಿದ ಅವರು, ರೈತರ ಬೆಳೆಗೆ ಬೆಲೆ ಕೊಡಿ, ಯುವಕರಿಗೆ ಉದ್ಯೋಗ ಕೊಡಿ, ನಮ್ಮಂತ ವೈಜ್ಞಾನಿಕ ವಿಚಾರವಾದಿಗಳನ್ನು ಬೇರೆಯಾಗಿ ಕಾಣುತ್ತಾರೆ ಎಂದರು. ಮಾಧ್ಯಮ ಎಂದರೆ ದೇವರು ನ್ಯಾಯ ಕೊಡದಿದ್ದಾಗ ಪೆನ್ನು ಮೂಲಕ ನ್ಯಾಯ ಒದಗಿಸುವುದಾಗಿದೆ ಎಂದರು.
ಇಂದ್ರ ಬಲ, ಚಂದ್ರ ಬಲ, ಕೈ ತೋರಿಸದಿರಿ ತೋಳ್ಬಲದಿಂದ ಬದುಕು ಸಾಗಿಸಲು ಹೇಳಿದ ಅವರು, ಮೂಢನಂಬಿಕೆ ಬಿಟ್ಟು ವೈಚಾರಿಕ, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಜೀವನ ಸಾಗಿಸಿ, ಕಷ್ಟಕ್ಕೆ ದೇವರು ಪರಿಹಾರವಲ್ಲ ದುಡಿಮೆಯೇ ಪರಿಹಾರ ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ನಾವು ಬದಲಾಗಬೇಕಿದೆ. ಪ್ರಕೃತಿ ಬದಲಾಗಿದೆ. ನಾವು ವೈಜ್ಞಾನಿಕವಾಗಿ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಪಾಲಕರು ಬದಲಾಗಬೇಕು, 5 ಸಿ ಗಳಿಂದ ಮಕ್ಕಳು ದಾರಿ ತಪ್ಪುತ್ತಿದೆ. ಸೆಲ್, ಚಾಟಿಂಗ್, ಸಿರಿಯಲ್, ಸಿನಿಮಾ, ಕ್ರಿಕೆಟ್ ತ್ಯಜಿಸಿ, ಮಕ್ಕಳಿಗೆ ಪಾಸಿಟೀವ್ ವಿಚಾರ 5 ಐ… ಕೊಡಬೇಕಿದೆ ಎಂದು ಒತ್ತಿ ಹೇಳಿದರು. 2026ರಲ್ಲಿ ಚಂದ್ರನ ಮೇಲೆ ಮನೆ ಮಾಡುತ್ತಿದ್ದೇವೆ. ಮನೆಯ ವಾಸ್ತು ಅಲ್ಲ ಮನಸ್ಸಿನ ವಾಸ್ತು ನೋಡಿ. ಪಂಚಾಂಗ ಅಲ್ಲ, ಪಂಚ ಅಂಗಗಳು ನೋಡಿ ಎಂದು ವೈಜ್ಞಾನಿಕ ವಿಚಾರಗಳನ್ನು ಹೇಳಿದರು.
ನೇತೃತ್ವವಹಿಸಿ ಪೂಜ್ಯ ಮ.ನಿ.ಪ್ರ. ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಪಿಎಸ್ಐ ಹಣಮಂತ ಬಂಕಲಗಿ ಮಾತನಾಡಿದರು. ಉದ್ಘಾಟಕರಾಗಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಆರ್. ಪೊಲೀಸ್ ಪಾಟೀಲ್, , ವಿಶ್ವಾರಾಧ್ಯ ಸತ್ಯಂಪೇಟ, ವಾಸುದೇವ ಪತ್ರಕರ್ತರು, ರವೀಂದ್ರ ಚೌವ್ಹಾಣ್ ಶಿಕ್ಷಣ ಸಂಯೋಜಕರು, ಸೂರ್ಯಕಾಂತ್ ಎನ್. ಘಂಟಿ ವೇದಿಕೆಯಲ್ಲಿದ್ದರು. ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಬೃಂದಾ ತಂಬಾಕೆ ವಹಿಸಿದ್ದರು.
ನಿರೂಪಣೆಯನ್ನು ಮಧುಶ್ರೀ ಮತ್ತು ವಿಶಾಲ್, ಸ್ವಾಗತ ಭಾಷಣ ವಿಹಾನ್ ಸೇಡಂಕರ್, ಕುಮಾರಿ ಭಾಗ್ಯಶ್ರೀ ನಾಗರೆಡ್ಡಿ, ವಂದನಾರ್ಪಣೆ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ರಮೇಶ ಅನಸೂರ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
