ಯಾದಗಿರಿ: ಬಿಹಾರ ಚುನಾವಣೆಯಲ್ಲಿ ಎನ್.ಡಿ.ಎ ದಿಗ್ವಿಜಯ ಹಿನ್ನಲೆ ಸುಭಾಷ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು. ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ನೇತೃತ್ವದಲ್ಲಿ ನೆರೆದ ಕಾರ್ಯಕರ್ತರು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಬಿಹಾರ ವಿಧಾನಸಭಾ 243 ಕ್ಷೇತ್ರಕ್ಕೆ 2 ಹಂತದಲ್ಲಿ ನಡೆದ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದ್ದು, ಎನ್ ಡಿಎ ಕೂಟ ಗೆದ್ದು ಬೀಗಿದರೆ, ಕೈ ಮಿತ್ರ ಪಕ್ಷಗಳು ಸೋತು ಸುಣ್ಣವಾಗಿವೆ. ಎನ್ ಡಿಎ 202 ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, 35 ಸ್ಥಾನ ಘಟಬಂಧನ ಹಾಗೂ 6 ಸ್ಥಾನ ಇತರರ ಪಾಲಾಗಿದೆ. ಇನ್ನು ನಿಖರ ಫಲಿತಾಂಶ ಬರಬೇಕಿದ್ದು, ಅಂಕಿಗಳು ಬದಲಾಗುವ ಸಾಧ್ಯತೆಗಳಿವೆ.
ಅತ್ಯಂತ ಕಿರಿಯ ವಯಸ್ಸಿನ ಮೈಥಿಲಿ ಠಾಕೂರ್ (ಸಂಗೀತ ಕಲಾವಿದೆ) ಆಲಿನಗರ (ಸೀತಾ ನಗರ) ವಿಧಾನಸಭೆ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರ ಮಾಡುವ ಸಂಕಲ್ಪ ಅವರದಾಗಿದೆ.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ವಿಭೂತಿ ಹಳ್ಳಿ, ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಧನೆ ನೋಡಿ ಜನರು ಆಶೀರ್ವಾದ ಮಾಡಿದ್ದಾರೆ. ದೇಶದ ಸುರಕ್ಷತೆ, ಭದ್ರತೆಯನ್ನು ದೇಶವಾಸಿಗಳು ಪ್ರಾಮುಖ್ಯತೆ ನೀಡಿದ್ದಾರೆ ಎಂದರು.
ಬಿಹಾರ ಅಭಿವೃದ್ಧಿಗೆ ಜನರು ಆದ್ಯತೆ ನೀಡಿದ್ದು, ಬಿಜೆಪಿಯಿಂದ ಮಾತ್ರ ಪ್ರಾಮಾಣಿಕ ಕೆಲಸಗಳು ಸಾಧ್ಯ. ಈ ಫಲಿತಾಂಶ ಮುಂದಿನ ಚುನಾವಣೆಗಳಿಗಘ ದಿಕ್ಸೂಚಿಯಾಗಿದೆ ಎಂದರು. ಈ ವೇಳೆ ನಾಗರತ್ನ ಕುಪ್ಪಿ, ಮಹೇಶ ಗೌಡ ಮುದ್ನಾಳ, ಖಂಡಪ್ಪ ದಾಸನ್, ಸುರೇಶ ಅಂಬಿಗೇರ, ವೆಂಕಟರೆಡ್ಡಿ ಅಬ್ಬೆತುಮಕೂರು, ಮೌನೇಶ ಬೆಳಗೇರಾ, ಸ್ವಾಮಿದೇವ ದಾಸನ್, ಚಂದ್ರಶೇಖರ ಕಡೇಚೂರ, ವೀರುಪಾಕ್ಷ ಮಠಪತಿ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
