ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟ | ವಿಜೇತರಿಗೆ 20,000 ರೂಪಾಯಿ ನಗದು ಬಹುಮಾನ, ಟ್ರೋಫಿ ವಿತರಣೆ
ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಒಟ್ಟು 20,000 ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಣೆ ಮಾಡಲಾಯಿತು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಸಂಜೆ ನಡೆದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು ವಿತರಣೆ ಮಾಡಿದರು.
ಕಬಡ್ಡಿ, ವಾಲಿಬಾಲ್ ಮತ್ತು ಕ್ರಿಕೆಟ್ ನಲ್ಲಿ ವಿಜೇತ ತಂಡಗಳಿಗೆ ತಲಾ 5,000 ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು. ಸೋತ ತಂಡಗಳಿಗೆ ಮೆಡಲ್ ನೀಡಿ ಗೌರವಿಸಲಾತು.
ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಲೀಂ ಮತ್ತು ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದ ಮಲ್ಲಾರಾವ್ ಕುಲಕರ್ಣಿ ಅವರಿಗೆ ತಲಾ 1,000 ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು.
ಕೇರಂ ಡಬಲ್ ವಿಭಾಗದ ವಿಜೇತರಾದ ರಾಜು ಕುಂಬಾರ ಮತ್ತು ಸಿದ್ದಲಿಂಗರೆಡ್ಡಿ ಮುನಗಾಲ್ ಹಾಗೂ ಬ್ಯಾಡ್ಮಿಂಟನ್ ಡಬಲ್ ವಿಜೇತರಾದ ಅಮೀನ್ ಹೊಸೂರು ಮತ್ತು ದೇವು ವಡವಟ್ ಮತ್ತು ಬ್ಯಾಡ್ಮಿಂಟನ್ ಸಿಂಗಲ್ ವಿಜೇತ ಭೀಮಣ್ಣ ವಡವಟ್ ತಲಾ 5,00 ರೂಪಾಯಿ ನಗದು ಬಹುಮಾನ ಮತ್ತು ಸೋತ ಆಟಗಾರರಿಗೆ ಮೆಡಲ್ ವಿತರಿಸಲಾತು.
ಚೆಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿಜಯಾಚಾರ್ಯ ಪುರೋಹಿತ ಅವರಿಗೆ ನಗದು ಬಹುಮಾನ 500 ರೂಪಾಯಿ ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಕ್ರೀಡೆಗಳಿಂದ ಉತ್ತಮವಾದ ಆರೋಗ್ಯ ವೃದ್ಧಿಯಾಗುತ್ತದೆ. ದೈಹಿಕವಾಗಿ ಸದೃಢತೆ ಹೊಂದಲು ಕ್ರೀಡೆ ರಾಮಭಾಣವಾಗಿದೆ ಎಂದರು.
ಒತ್ತಡ ನಿವಾರಣೆಗೆ ಕ್ರೀಡೆಗಳು ಪೂರಕವಾಗಿವೆ. ಪತ್ರಕರ್ತರು ವೃತ್ತಿ ಜತೆಗೆ ಆರೋಗ್ಯದ ಕಡೆಗೆ ಒತ್ತು ನೀಡಲು ಕ್ರೀಡೆಗಳಲ್ಲಿ ಭಾಗವಹಿ ಸಬೇಕು ಎಂದು ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ, ರಾಜ್ಯ ಪರಿಷತ್ತು ಸದಸ್ಯ ಸಾಗರ್ ದೇಸಾಯಿ, ಜಿಲ್ಲಾ ಖಜಾಂಚಿ ರಾಜು ನಲ್ಲಿಕರ್ ಸೇರಿದಂತೆ ಇನ್ನಿತರರಿದ್ದರು.
