ತೆಲಂಗಾಣದ ಗುಂಡಿಗೆ ಅಂಟಿಕೊಂಡಿರುವ ಮಲ್ಲಾಪುರದಲ್ಲಿ ಅಧಿಕಾರಿಗಳ ದಾಳಿ | ರೈತರು ಮೋಸ ಹೋಗುವುದು ತಡೆಯುವ ನಿಟ್ಟಿನಲ್ಲಿ ಎಚ್ಚಿತ್ತ ಕೃಷಿ ಇಲಾಖೆ | ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಗುರುಮಠಕಲ್/ ಯಾದಗಿರಿ: ಗಡಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ನಕಲಿ ಬೀಜ ಮಾರಾಟಗಾರರು ಪ್ರತಿ ವರ್ಷ ರೈತರನ್ನು ಯಾಮಾರಿಸಿ ನಕಲಿ ಬೀಜ ನೀಡುತ್ತಿದ್ದರಿಂದ ಸಾಕಷ್ಟು ಕಷ್ಟ ಪಟ್ಟು ಬಿತ್ತಿದ ರೈತರಿಗೆ ಬೆಳೆಯೇ ಬಾರದೇ ಕಂಗಾಲಾಗುತ್ತಿದ್ದ ಘಟನಗಳು ವರದಿಯಾಗುತ್ತಲೇ ಇರುತ್ತವೆ.
ಇದೀಗ ಗುರುಮಠಕಲ್ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಅಕ್ರಮವಾಗಿ ಹತ್ತಿ ಬೀಜ ಮಾರಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಶ್ರೀಶೈಲ್ ಒಳಗೊಂಡ ತಂಡ ದಾಳಿ ಮಾಡಿದೆ.
ಆರೋಪಿಯಿಂದ ಸುಮಾರು 53 ಕೆಜಿ ಯಷ್ಟು ಅಂದಾಜು 1.02ಲಕ್ಷ ರೂಪಾಯಿ ಮೌಲ್ಯದ ಹತ್ತಿ ಬೀಜಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಗುರುಮಠಕಲ್ ಠಾಣೆಯಲ್ಲಿ ಆರೋಪಿ ಶ್ರೀನಿವಾಸ ವಿರುದ್ಧ ಪ್ರಕರಣ ದಾಖಲಾಗಿದೆ. ಅಧಿಕಾರಿಗಳ ತನಿಖೆಯಿಂದ ಬೀಜ ನಕಲಿಯೋ ಇಲ್ಲ ಅಸಲಿ ಎನ್ನುವ ಸತ್ಯಾಂಶ ತಿಳಿಯಲಿದೆ.
ಹೆಚ್ಚಿನ ಬೆಲೆ ಮಾರಾಟ ನಿಯಂತ್ರಣ ಮಾಡಿ : ಪಟ್ಟಣದ ಅಂಗಡಿಗಳಲ್ಲಿ ನಿತ್ಯ ಗ್ರಾಮೀಣ ಪ್ರದೇಶದ ನೂರಾರು ರೈತರು ರಾಸಾಯನಿಕ ಗೊಬ್ಬರ ಖರೀದಿಗೆ ಬರುತ್ತಾರೆ. ಅಮಾಯಕ ರೈತರಿಂದ ಹೆಚ್ಚಿನ ದರ ಪಡೆಯಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದನ್ನು ನಿಯಂತ್ರಿಸಲು ಅಧಿಕಾರಿಗಳು ಮುಂದಾ ಗಬೇಕು ಎನ್ನುವದು ರೈತರು ಒತ್ತಾಯ.
