ಪಂಚಾಯತ ಮೊಹಲ್ಲಾ ಹನುಮಾನ ಮಂದಿರದಲ್ಲಿ ಸಪ್ತ ಭಜನೆ | ಮೇಂಗಜಿ ಕುಟುಂಬದವರಿಂದ ಧಾರ್ಮಿಕ ಕಾರ್ಯ ಆಯೋಜನೆ | ಸೆ.4ರಿಂದ ಸತತ 7 ದಿನ ನಡೆಯಲಿದೆ ಭಗವಂತ ನಾಮಸ್ಮರಣೆ
ಗುರುಮಠಕಲ್: ಇಲ್ಲಿನ ಪಂಚಾಯಿತ ಮೊಹಲ್ಲಾ ಹನುಮಾನ ಮಂದಿರದಲ್ಲಿ ಚಂದ್ರಕಾಂತ ಮತ್ತು ಸಂಜೀವ ಕುಮಾರ್ ಕಿಶನರಾವ ಮೇಂಗಜಿ ಅವರಿಂದ ಸಪ್ತ ಭಜನೆ ಆಯೋಜಿಸ ಲಾಗಿದೆ. ಸೆ.4 ರಂದು ಅತ್ಯಂತ ಉಲ್ಲಾಸದಿಂದ ಅಖಂಡ ಭಜನೆಗೆ ಚಾಲನೆ ದೊರೆತಿದೆ. ಸೆ.11ರಂಜು ಬೆಳಿಗ್ಗೆ 6ಕ್ಕೆ ಭಜನೆ ಸಂಪನ್ನ ಗೊಳ್ಳಲಿದೆ. ಅಂದು ಸಾಮೂಹಿಕ ದಾಸೋಹ ನೆರವೇರಲಿದೆ.
ಕಲಿಯುಗದಲ್ಲಿ ಕೇವಲ ಭಗವಂತನ ನಾಮಸ್ಮರಣೆಯಿಂದಲೇ ದೊಡ್ಡ ಪುಣ್ಯ ಲಭಿಸುವ ಹಿಂದು ಧರ್ಮದ ನಂಬಿಕೆಯಂತೆ ಸತತ ಭಜನೆ, ಕೀರ್ತನೆ ಹಾಡುವುದು, ಆಲಿಸುವುದರಿಂದ ಅಂತಃಕರಣ ಶುದ್ಧಿಯಾಗುತ್ತದೆ.
ಸಪ್ತ ಭಜನೆ ಎಂಬುದು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಮತ್ತು ಸಾಮೂಹಿಕ ಧಾರ್ಮಿಕ ಆಚರಣೆಯಾಗಿದೆ. ಏಳು ದಿನಗಳ ಕಾಲ ನಿರಂತರವಾಗಿ (ಅಖಂಡವಾಗಿ) ದೇವರ ನಾಮಸ್ಮರಣೆ, ಕೀರ್ತನೆ ಮತ್ತು ಭಜನೆ ಮಾಡಲಾಗುತ್ತದೆ. ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಭಜನೆಯಲ್ಲಿ ಪಾಲ್ಗೊಳ್ಳುವುದು ಸಮಾಜದಲ್ಲಿ ಒಗ್ಗಟ್ಟು, ಶಾಂತಿ ಮತ್ತು ಭ್ರಾತೃತ್ವದ ಭಾವನೆಯನ್ನು ಬೆಳೆಸುತ್ತದೆ.
ಅಖಂಡ ನಾಮಸ್ಮರಣೆ: ಸಪ್ತಾಹದಲ್ಲಿ ಹಗಲು-ರಾತ್ರಿ ಎನ್ನದೆ ೨೪ ಗಂಟೆಯೂ ಭಗವಂತನ ನಾಮಸ್ಮರಣೆ ನಡೆಯುತ್ತದೆ. “ಕಲಾವಿಹಾಯ ನಾಮೈಕಂ” ಎಂಬಂತೆ, ಕಲಿಯುಗದಲ್ಲಿ ಮೋಕ್ಷ ಪ್ರಾಪ್ತಿಗೆ ನಾಮಸಂಕೀರ್ತನೆಯೇ ಅತ್ಯಂತ ಸರಳ ಮಾರ್ಗ ಎಂದು ನಂಬಲಾಗಿದೆ.
ಮನಸ್ಸಿನ ಶುದ್ಧೀಕರಣ: ನಿರಂತರವಾಗಿ ದೇವರ ನಾಮವನ್ನು ಕೇಳುವುದರಿಂದ ಮತ್ತು ಹೇಳುವುದರಿಂದ ಮನುಷ್ಯನ ಮನಸ್ಸಿನಲ್ಲಿರುವ ಕಾಮ, ಕ್ರೋಧ, ಲೋಭಗಳೆಂಬ ಕಲ್ಮಷಗಳು ದೂರವಾಗಿ, ಅಂತಃಕರಣ ಶುದ್ಧಿಯಾಗುತ್ತದೆ. ಅಲ್ಲದೇ ಸಪ್ತ ಭಜನೆಯಿಂದ ಊರಿಗೆ ಸಕಾರಾತ್ಮಕ ಶಕ್ತಿ (Positive Energy) ಲಭಿಸುತ್ತದೆ ಎಂಬ ನಂಬಿಕೆ ಇದೆ. ಸಪ್ತ ಭಜನೆಯು ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಮನುಷ್ಯನಲ್ಲಿ ಭಕ್ತಿ, ನಮ್ರತೆ ಮತ್ತು ಪರೋಪಕಾರ ಗುಣಗಳನ್ನು ಬೆಳೆಸುವ ಮಹತ್ತರವಾದ ಕಾರ್ಯವಾಗಿದೆ.
