ವ್ಯಾಪಕ ಮಳೆಯಿಂದ ಕಚ್ಚಾ ರಸ್ತೆ ತುಂಬ ಕೆಸರು | ಜನ, ಜಾನುವಾರುಗಳ ಸಂಕಷ್ಟ | ಸಮಸ್ಯೆಗೆ ಸ್ಪಂದಿಸಬೇಕಿದೆ ಅಧಿಕಾರಿ ವರ್ಗ
ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಸುರಿದ ವ್ಯಾಪಕ ಮಳೆ ಅತಿವೃಷ್ಟಿ ಸೃಷ್ಟಿಸಿ ರೈತರ ಬೆಳೆ ನೀರು ಪಾಲಾಗಿದ್ದು, ಇದೀಗ ರೈತರು ತಮ್ಮ ಜಮೀನುಗಳಿಗೆ ತೆರಳಲು ತೀರಾ ಸಂಕಷ್ಟ ಅನುಭವಿಸುತ್ತಿದ್ದಾರೆ.
ಹೌದು, ವಡಗೇರ ತಾಲೂಕಿನ ಕೊಂಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನಕಸೂಗುರು ಗ್ರಾಮದಲ್ಲಿ ರೈತರ ಜಮಿನುಗಳಿಗೆ ಹೋಗುವ ಮುಖ್ಯ ದಾರಿ, ಸಂಪೂರ್ಣ ಕೆಸರಿನಿಂದ ಕೂಡಿದ್ದು, ರೈತರು ಚಕ್ಕಡಿ ಗಾಡಿ ಕಟ್ಟಿಕೊಂಡು ಹೊಲಗಳಿಗೆ ಹೋಗುವುದೇ ಸವಾಲಾಗಿದೆ.
ನಿನ್ನೆಯಷ್ಟೇ ಕೆಸರಿನಲ್ಲಿ ಎತ್ತುಗಳ ಕಾಲು ಸಿಲುಕಿಕೊಂಡು ಪರಿತಪಿಸುವಂತಾಗಿದೆ. ಈ ಮಾರ್ಗದಲ್ಲಿ ಸಾಗುವುದು ಸರ್ಕಸ್ ಮಾಡಿದಂತಾಗಿದ್ದು, ಈ ಬಗ್ಗೆ ಸ್ಥಳೀಯ ಸಂಸ್ಥೆ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಬಹುತೇಕ ರೈತರು ಹೊಲ ಗದ್ದೆಗಳಿಗೆ ತೆರಳುವ ಮಾರ್ಗವಾಗಿದ್ದು, ರಸ್ತೆ ಸೌಕರ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಗ್ರಾ.ಪಂ. ಅಧಿಕಾರಿ ನಿರ್ಲಕ್ಷ್ಯ: ಗ್ರಾಮೀಣ ಭಾಗದ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಬೇಕಿರುವ ಸ್ಥಳೀಯ ಅಧಿಕಾರಿ, ಜನಪ್ರತಿನಿಧಿಗಳು ರೈತರ ಸಮಸ್ಯೆ ಗೆ ಸ್ಪಂದಿಸದಿರುವುದು ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಲಾದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸದೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
