ಕಾಂಗ್ರೆಸ್ ಸರ್ಕಾರದ ಮಹತ್ವದ ಇಂದಿರಾ ಕ್ಯಾಂಟೀನ್ ಉದ್ಘಾಟನೆ | ಕಡಿಮೆ ಬೆಲೆಗೆ ಬಡ ಜನರ ಹೊಟ್ಟೆ ತುಂಬಿಸಲಿದೆ ಯೋಜನೆ
ಗುರುಮಠಕಲ್: ಸರ್ಕಾರದಿಂದ ಬಡ ಜನರಿಗೆ ಕಡಿಮೆ ಬೆಲೆಗೆ ತಿಂಡಿ, ಊಟ ವಿತರಿಸುವ ಇಂದಿರಾ ಕ್ಯಾಂಟೀನ್ ಉಪಯೋಗ ಪಡೆಯಬೇಕು ಎಂದು ಮುಖ್ಯಾಧಿಕಾರಿ ಭಾರತಿ ಸಿ. ದಂಡೋತಿ ಹೇಳಿದರು.
ಇಲ್ಲಿನ ಬಸವೇಶ್ವರ ಗಂಜ್ ಪ್ರದೇಶದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿ, ಯೋಜನೆಯಡಿ 5 ರೂ.ತಿಂಡಿ, 10 ರೂ.ಊಟ ನೀಡಲಾಗುವುದು ಜನರು ಇದರ ಉಪಯೋಗ ಪಡೆಯಬೇಕು ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಆರ್ ಪಾಟೀಲ್ ಉದ್ಘಾಟನೆ ನೆರವೇರಿಸಿದರು. ಉಪಾಧ್ಯಕ್ಷೆ ರೇಣುಕಾ ಪಡಿಗೆ, ಸದಸ್ಯರಾದ ಬಾಬು ತಲಾರಿ, ಖಾಜಾ ಮೋನೋದ್ದೀನ್, ಪಾಪರೆಡ್ಡಿ ಬುರ್ಜು, ಬಾಲಪ್ಪ ದಾಸರಿ, ಆಶನ್ನ ಬುದ್ಧ, ಕೃಷ್ಣಾ ಮೇದಾ, ನವಾಜರೆಡ್ಡಿ ಪಾಟೀಲ್, ನರ್ಮದಾ, ಪ್ರಮುಖರಾದ ಕೃಷ್ಣಾರೆಡ್ಡಿ ಪಾಟೀಲ್, ಬಸಣ್ಣ ದೇವರಹಳ್ಳಿ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಶರಣು ಆವುಂಟ, ಮಂಡಲ ಅಧ್ಯಕ್ಷ ಪ್ರಕಾಶ ನೀರೆಟಿ, ಚಂದುಲಾಲ ಚೌಧರಿ, ರಘುನಾಥರೆಡ್ಡಿ ಸೇರಿದಂತೆ ಇತರರು ಇದ್ದರು.
ಅಸಮಾಧಾನ: ಸರ್ಕಾರದ ಮಹತ್ವದ ಯೋಜನೆಯಾಗಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆಗೆ ಬರಬೇಕಿತ್ತು ಎನ್ನುವ ಗುಸುಗುಸು ಕೈ ಕಾರ್ಯಕರ್ತರಿಂದ ಕೇಳಿ ಬಂತು. ಇನ್ನು ತಾಲೂಕು ಮಟ್ಟದ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಿಸಿತು.
