ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಆಗ್ರಹ | ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಮಸೂದೆ ಅತ್ಯಂತ ಮಹತ್ವ
ಯಾದಗಿರಿ: ಮಹಿಳಾ ಮೀಸಲಾತಿ ಮಸೂದೆ (ನಾರಿ ಶಕ್ತಿ ವಂದನಾ ಅಧಿನಿಯಮ) ಜಾರಿಗೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಮತ್ತು ನಾರಿ ಶಕ್ತಿ ಫೋರಂ ವತಿಯಿಂದ ಶನಿವಾರ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಲ್ನಲ್ಲಿ ಭಾರೀ ಪ್ರತಿಭಟನೆ ಮತ್ತು ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಮಹಿಳಾ ನಾಯಕಿಯರು ಹಾಗೂ ಕಾರ್ಯಕರ್ತೆಯರು ಕೇಂದ್ರ ಸರ್ಕಾರ ಅಂಗೀಕರಿಸಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಈ ಮಸೂದೆ ಅತ್ಯಂತ ಮಹತ್ವದ್ದಾಗಿದ್ದು, ಅದರ ಜಾರಿಯಲ್ಲಿ ಉಂಟಾಗುತ್ತಿರುವ ವಿಳಂಬವು ಮಹಿಳೆಯರ ಹಕ್ಕುಗಳಿಗೆ ಧಕ್ಕೆ ತರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಪದಾಧಿಕಾರಿಗಳು ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸಮಾನ ಪ್ರತಿನಿಧಿತ್ವ ಸಿಗಬೇಕಾದರೆ ಮೀಸಲಾತಿ ಅನಿವಾರ್ಯ. ಮಹಿಳಾ ಹಕ್ಕುಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳು ದ್ವಂದ್ವ ನಿಲುವು ತಾಳದೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಅವರು ಇನ್ನೂ ಮುಂದುವರೆದು, ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವುದು ದೇಶದ ಪ್ರಗತಿಗೆ ಸಹಾಯಕವಾಗುತ್ತದೆ. ಆದ್ದರಿಂದ ಮಸೂದೆ ಜಾರಿಗೆ ಯಾವುದೇ ರೀತಿಯ ವಿಳಂಬ ಅನುಮತಿಸಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕು.ಲಲಿತಾ ಅನಪುರ, ಹಿರಿಯ ಮುಖಂಡೆ ನಾಗರತ್ನ ಕುಪ್ಪಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌಹಾಣ್, ಜಿಲ್ಲಾ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ ನಾಯಕ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮಾದೇವಿ ಕಾವಲಿ ಮತ್ತು ಮಲ್ಲಮ್ಮ ಹೊಸಪೇಟೆ,ಸ್ನೇಹ ರಸಳಕರ, ಶಕುಂತಲಾ ಜಿ,ನಗರ ಮಂಡಲ ಅಧ್ಯಕ್ಷೆ ಭೀಮಬಾಯಿ ಶೆಂಡಿಗಿ,ಗ್ರಾಮೀಣ ಮಂಡಲ ಅಧ್ಯಕ್ಷೆ ಕರೇಮ್ಮ ವರ್ಕನಳ್ಳಿ,ಬಾಲಮ್ಮ, ಮಮತಾ ಜಾಧವ, ಮಹಾದೇವಮ್ಮ ಕೋಳ್ಳುರ,ಅಂಜಲಿ ರಾಠೋಡ, ಜ್ಯೋತಿ,ಮರೆಮ್ಮ,ಶಿವಗಂಗಮ್ಮ,ಶರಣಮ್ಮ,ರೇಣುಕಾ, ಶರಣಮ್ಮ ಮೆಳಿಕೇರಿ, ಶಾಂತಮ್ಮ, ಸಿದ್ದಮ್ಮ ಸೇರಿದಂತೆ ಅನೇಕ ಮಹಿಳಾ ಮೋರ್ಚಾ ಪದಾಧಿಕಾರಿಗಳ ಉಪಸ್ಥಿತರಿದ್ದರು.
