ಸಚಿವರಿಂದ ಗೃಹ ಆರೋಗ್ಯ ಯೋಜನೆ ಉದ್ಘಾಟನೆ | ಮನೆ ಮನೆಗೆ ಭೇಟಿ ನೀಡುವ ಮಹತ್ವದ ಸೇವೆ

ಬೀದರ: ಮನೆ ಬಾಗಿಲಿಗೇ ಆರೋಗ್ಯ ಸೇವೆ ಒದಗಿಸುವ ಗೃಹ ಆರೋಗ್ಯ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿ ಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಲ್ಲಾ ಅಸಾಂಕ್ರಮಿಕ ನಿಯಂತ್ರಣ ಕೋಶ ಇವರ ಸಹಯೋಗದಲ್ಲಿ ನಡೆದ ಗೃಹ ಆರೋಗ್ಯ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಸೇವೆ, ಮನೆ ಮನೆಗೆ ಎಂಬ ಧ್ಯೇಯದಲ್ಲಿ 14 ಅಸಾಂಕ್ರಾಮಿಕ ರೋಗಗಳಾದ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಡಯಾಬಿಟಿಕ್ ಪೂಟ್, ಡಯಾಬಿಟಿಕ್ ರೆಟಿನೋಪತಿ, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನರವೈಜ್ಞಾನಿಕ ಸಮಸ್ಯೆಗಳು, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ಧೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಧೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಲಿವರ್ ಕಾಯಿಲೆ, ರಕ್ತಹೀನತೆ ಆರೋಗ್ಯ ಸಮಸ್ಯೆಗಳು ಇರುವ 30 ವರ್ಷ ಮೇಲ್ಪಟ್ಟವರಿಗೆ ಉಚಿತ ತಪಾಸಣೆ, ಚಿಕಿತ್ಸೆ ಮತ್ತು ಅನುಸರಿಸಬೇಕಾದ ವಿಧಾನದ ಬಗ್ಗೆ ಈ ಯೋಜನೆಯ ಮನೆ ಮನೆಗೆ ಭೇಟಿ ನೀಡುವುದರ ಮೂಲಕ ಸೇವೆ ಒದಗಿಸಲಾಗುವುದು ಎಂದರು.

ನಮ್ಮ ಸರ್ಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಮತ್ತು ರೋಗಿಗಳ ನಿಯಂತ್ರಣಕ್ಕೆ ಹೆಚ್ಚು ಕ್ರಮ ಕೈಗೊಳ್ಳುತ್ತಿದೆ. ಇಂದಿನ ಪರಿಸರ ಮಾಲಿನ್ಯದಿಂದ ಆಹಾರ, ನೀರು, ಗಾಳಿ ಮಲೀನವಾಗುತ್ತಿದೆ, ಬದಲಾದ ಜೀವನ ಶೈಲಿ, ಒತ್ತಡದ ಜೀವನ ಮತ್ತು ದುಶ್ಚಟಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿ ರೋಗಿಗಳಿಗೆ ಅನುವು ಮಾಡಿಕೊಡುತ್ತಿದೆ ಮತ್ತು ನಗರೀಕರಣ, ಕೈಗಾರೀಕರಣಗಳು ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದರು.

ಯುವಕರ ಶಾರೀರಿಕ ಸದೃಢತೆ ಇಲ್ಲದೆ ಇರುವುದು, ಮಕ್ಕಳಲ್ಲಿ ಅನಾಮಿಯಾ, ತೂಕ ಕಡಿಮೆ, ಬೆಳವಣಿಗೆ ಕುಂಠಿತ, ಜೀವನಾಯುಷ್ಯ ಕಡಿಮೆ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಬಹುದು ಎಂದರು. ಅಸಾಂಕ್ರಮಿಕ ರೋಗಗಳಿಂದ 60% ರಿಂದ 65% ಜನರು ಮರಣ ಹೊಂದುತ್ತಿದ್ದಾರೆ ಎಂದು ಸಮೀಕ್ಷೆಗಳು ತಿಳಿಸುತ್ತಿವೆ ಆದ್ದರಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ವೈದ್ಯರು, ಆಯುಷ್ಯ ಅಧಿಕಾರಿಗಳು, ಅಶಾ ಕಾರ್ಯಕರ್ತೆಯರು ಇದರಲ್ಲಿ ಪಾತ್ರ ಬಹಳ ದೊಡ್ಡದು, ಮನೆ ಮನೆಗೆ ಭೇಟಿ ನೀಡಿ 100% ಸಾಧನೆ ಮಾಡಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ, ಡಿಹೆಚ್ಓ ಧ್ಯಾನೇಶ್ವರ ನಿರಗುಡೆ, ಜಿಲ್ಲಾ ಶಸ್ತ್ರ ಚಿಕಿತ್ಸಕ ಅಹಮದುದ್ದಿನ್, ಜಿಲ್ಲಾ ಸರ್ವೇಕ್ಷಣಾ ಆಧಿಕಾರಿ ಶಂಕ್ರಪ್ಪಾ ಬೊಮ್ಮಾ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ನರ್ಸ್ಗಳು, ಟೆಕ್ನಿಷಿಯನ್‌ಗಳು ಸೇರಿ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!