ವಿಘ್ನನಿವಾರಕ ಗಣಪತಿಯ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಸಂಕಲ್ಪ ಮಾಡಬೇಕಿದೆ..

ವಿಘ್ನ ನಿವಾರಕ ಗಣೇಶನ ಆರಾಧನೆ ಎಂದರೆ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು ಇಡೀ ಸಮಾಜವನ್ನು ಒಂದೆಡೆ ಸೇರಿಸುವ ಸಾಂಸ್ಕೃತಿಕ ಮಹಾಪರ್ವ. ಆದರೆ ನಮ್ಮ ಆಚರಣೆಗಳು ಜೀವ ಸಂಕುಲಕ್ಕೆ ಮತ್ತು ಪ್ರಕೃತಿಗೆ ಹಾನಿಯುಂಟು ಮಾಡದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ, ರಾಜ್ಯ ಸರ್ಕಾರವು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಗೆ ಸ್ಪಷ್ಟ ಮಾರ್ಗಸೂಚಿ ನೀಡಿದ್ದು, ಎಲ್ಲರೂ ಆ ಮಾರ್ಗಸೂಚಿಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ಭಕ್ತಿ ಭಾವ ಮತ್ತು ಪರಿಸರ ಕಾಳಜಿಯೊಂದಿಗೆ ಈ ಬಾರಿಯ ಗಣೇಶೋತ್ಸವ ಆಚರಿಸೋಣ.

ನಿಸರ್ಗ ದೇವರಾದ ಗಣೇಶ, ನಮ್ಮೆಲ್ಲರ ನೆಚ್ಚಿನ ದೇವರು. ಗಣೇಶನ ಆನೆಯ ಮುಖ, ಮನುಷ್ಯ ದೇಹ, ಹಾವಿನ ಸೊಂಟದ ನಡು ಪಟ್ಟಿ ಹಾಗೂ ಇಲಿ ವಾಹನ—ಇವೆಲ್ಲವೂ ಜೀವವೈವಿಧ್ಯದ ಸಂಕೇತಗಳಾಗಿವೆ. ಆತ ಅಪ್ಪಟ ನಿಸರ್ಗ ದೇವರಾಗಿದರಿಂದಲೇ ಆತನಿಗೆ ಪ್ರಥಮ ಪೂಜೆ ಸಲ್ಲಿಕೆಯಾಗುತ್ತದೆ. ಆದ್ದರಿಂದ ಆತನನ್ನು ಪೂಜಿಸುವಾಗ ನಿಸರ್ಗದ ಸಮತೋಲನವನ್ನು ಕಾಪಾಡುವುದು ಅತ್ಯಗತ್ಯ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಬಣ್ಣಗಳಿಂದ ಲೇಪಿತವಾದ ಗಣೇಶ ಮೂರ್ತಿಗಳು ಜಲಮಾಲಿನ್ಯ ಉಂಟುಮಾಡುತ್ತವೆ. ಈ ಬಣ್ಣಗಳು ಕೆರೆ, ನದಿಗಳಲ್ಲಿನ ಜಲಚರಗಳಿಗೆ ಕಂಟಕವಾಗುತ್ತವೆ. ಆದ್ದರಿಂದ ಈ ಹಬ್ಬವನ್ನು ಸಂಪೂರ್ಣ ಪರಿಸರ ಸ್ನೇಹಿಯಾಗಿ ಆಚರಿಸಬೇಕು.

ಪಿಒಪಿ ಸಂಪೂರ್ಣ ನಿಷೇಧ, ಮಣ್ಣಿನ ಗಣಪನಿಗೆ ಆದ್ಯತೆ:  ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಹಾಗೂ ಅಪಾಯಕಾರಿ ರಾಸಾಯನಿಕ ಮತ್ತು ಭಾರಲೋಹ ಆಧಾರಿತ ಬಣ್ಣಗಳಿಂದ ಮಾಡಿದ ಗಣೇಶ ಮೂರ್ತಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ, ವಿತರಣೆ, ಪ್ರದರ್ಶನ ಹಾಗೂ ಪ್ರತಿಷ್ಠಾಪನೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ರಾಸಾಯನಿಕ ಮೂರ್ತಿಗಳು ಜಲಮೂಲಗಳನ್ನು ಕಲುಷಿತಗೊಳಿಸಿ, ಜಲಚರಗಳಿಗೂ ಹಾಗೂ ಮಾನವ ಆರೋಗ್ಯಕ್ಕೂ ತೀವ್ರ ಹಾನಿಯುಂಟು ಮಾಡುತ್ತವೆ.

ಆದ್ದರಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯ್ಯಾರಿಸಿದ ಗಣೇಶನ ಮೂರ್ತಿಗಳನ್ನು ಬಳಸದೆ ಬದಲಾಗಿ, ಕೇವಲ ನೈಸರ್ಗಿಕ ಜೇಡಿಮಣ್ಣು ಮತ್ತು ನೈಸರ್ಗಿಕ ಸಸ್ಯ ಜನ್ಯ ಬಣ್ಣಗಳಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಬಳಸಬೇಕು.

ಬೀಜ ಗಣಪತಿ’ ಮತ್ತು ನೈಸರ್ಗಿಕ ಆಚರಣೆ: ಮಣ್ಣಿನ ವಿಗ್ರಹವನ್ನು ತಯಾರಿಸುವಾಗ ಅದರ ಹೊಟ್ಟೆಯೊಳಗೆ ಹಣ್ಣು ಅಥವಾ ಹೂವಿನ ಗಿಡದ ಬೀಜವನ್ನಿಟ್ಟು ಮಾಡಬಹುದು. ಹಬ್ಬದ ನಂತರ ಈ ವಿಗ್ರಹವನ್ನು ಮನೆಯಲ್ಲಿಯೇ ವಿಸರ್ಜಿಸಿ ಮಣ್ಣಿನಲ್ಲಿ ಇಟ್ಟರೆ ಅದರಿಂದ ಸುಂದರವಾದ ಸಸ್ಯ, ಮರ ಬೆಳೆಯುತ್ತದೆ. ಪ್ರಖರ ಬಣ್ಣದ ಮೂರ್ತಿಗಳಲ್ಲಿ ಸೀಸ, ಕ್ಯಾಡ್ಮಿಯಂ, ಕ್ರೋಮಿಯಂನಂತಹ ಅಪಾಯಕಾರಿ ರಾಸಾಯನಿಕಗಳಿರುತ್ತವೆ. ಆದ್ದರಿಂದ ಸಸ್ಯರಸದಿಂದ ಮಾಡಿದ ನೈಸರ್ಗಿಕ ಬಣ್ಣಗಳನ್ನಷ್ಟೇ ಬಳಸಬೇಕು. ನೈಸರ್ಗಿಕ ಅಲಂಕಾರಗಳೇ ಗಣಪತಿಗೆ ಶ್ರೇಷ್ಠ.

ವಿಸರ್ಜನೆಗೆ ಕೃತಕ ಹೊಂಡ ಮತ್ತು ಸಂಚಾರಿ ತೊಟ್ಟಿಗಳು:  ನೈಸರ್ಗಿಕ ಕೆರೆ, ನದಿ ಮತ್ತು ಕೊಳಗಳ ಜಲಮಾಲಿನ್ಯ ತಡೆಯಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವ್ಯಾಪಕ ಸಿದ್ಧತೆ ನಡೆಸಿವೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಅಗತ್ಯ ಸಂಖ್ಯೆಯ ಕೃತಕ ವಿಸರ್ಜನಾ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ, ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರಿ ವಿಸರ್ಜನಾ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ.

ಶಬ್ದ ಮಾಲಿನ್ಯ ತಡೆ ಹಾಗೂ ಸಾಮಾಜಿಕ ಸೌಹಾರ್ದತೆ: ಹಬ್ಬದ ಆನಂದವು ಇತರರಿಗೆ ತೊಂದರೆಯಾಗಬಾರದು ಎಂಬುದು ಸರ್ಕಾರದ ಮುಖ್ಯ ಆಶಯ. ಸುಪ್ರೀಂ ಕೋರ್ಟ್ ಆದೇಶದಂತೆ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಡಿಜೆ (DJ) ಹಾಗೂ ಹೈ-ಡೆಸಿಬಲ್ ಧ್ವನಿವರ್ಧಕಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಶಬ್ದ, ಬೆಳಕು ಹಾಗೂ ಪರಿಸರ ಮಾಲಿನ್ಯವನ್ನು ತಡೆದು ಶಾಂತಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಿಸುವುದು ಪ್ರತಿಯೊಬ್ಬರ ಕರ್ತವ್ಯ. ಕಡಿಮೆ ಧ್ವನಿವರ್ಧಕ ಬಳಸಿ, ವಿದ್ಯುತ್ ಮಿತವ್ಯಯ ಮಾಡಿ, ಆಡಂಬರಮುಕ್ತವಾಗಿ ಪೂಜಿಸುವುದು ಸೂಕ್ತ.

ಸಾರ್ವಜನಿಕ ಜಾಗೃತಿ ಅಭಿಯಾನ:  ಪರಿಸರ ಸ್ನೇಹಿ ಹಬ್ಬದ ಮಹತ್ವವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆ,‌ ನಗರಸಭೆ, ತಾಲೂಕು ಕಚೇರಿ, ಗ್ರಾಮ ಪಂಚಾಯತಿ, ಶಾಲಾ-ಕಾಲೇಜುಗಳು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಯುವಜನತೆಯಲ್ಲಿ ಜಾಗೃತಿ ಮೂಡಿಸಿದರೆ ಸಮಾಜದಲ್ಲಿ ಖಂಡಿತ ಬದಲಾವಣೆ ಸಾಧ್ಯ.

ಪರಿಸರ ರಕ್ಷಣೆ ಎಂದರೆ ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಯ್ದುಕೊಳ್ಳುವುದು. ಪ್ರಕೃತಿಗೆ ಹಾನಿ ಮಾಡದೆ, ಸರ್ಕಾರದ ನಿಯಮಗಳನ್ನು ಗೌರವಿಸಿ, ಭಕ್ತಿ ಮತ್ತು ಸೌಹಾರ್ದತೆಯಿಂದ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸುವ ಮೂಲಕ ಸುಸ್ಥಿರ ಹಾಗೂ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಬೇಕು. ನಮ್ಮ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ.

✍️ಅಶೀಷ ಕುಮಾರ ಹಜಾರೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೀದರ.

Spread the love

Leave a Reply

Your email address will not be published. Required fields are marked *

error: Content is protected !!