ಲಕ್ಷ್ಮೀ ದೇವಸ್ಥಾನದಲ್ಲಿ ಅಕ್ಷರಾಭ್ಯಾಸ | 45ಕ್ಕು ಹೆಚ್ಚು ಮಕ್ಕಳು ಭಾಗಿ| ಅಕ್ಷರ ಜ್ಞಾನದಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ
ಗುರುಮಠಕಲ್ : ಮಾನವ ಜೀವನದಲ್ಲಿ ಶೋಷಡೋಪಚಾರ ಸಂಸ್ಕಾರಗಳಲ್ಲಿ ಒಂದಾದ ಅಕ್ಷರಾಭ್ಯಾಸವು ಉತ್ತಮ ಸಂಸ್ಕಾರ ನೀಡುವ ಮಹತ್ವದ ಘಟ್ಟವಾಗಿದೆ ಎಂದು ಮಳಖೇಡ ಮೂಲಾಧಾರ ಮಠದ ಪೂಜ್ಯ ಅಭಿನವ ಕಾರ್ತಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಯೋಜಿಸಲಾದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅಕ್ಷರ ಜ್ಞಾನವು ಮಾನವನನ್ನು ತುಂಬ ಎತ್ತರದ ಸ್ಥಾನಕ್ಕೆ ಏರಿಸುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸಿ ಶಾಲೆಗೆ ಕಳಿಸುವ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿಯೂ ಪಾಲಕರ ಮೇಲಿದೆ.
ಮಕ್ಕಳಿಗೆ ಅಕ್ಷರಾಭ್ಯಾಸದ ಮೂಲಕ ಉತ್ತಮ ಸಂಸ್ಕಾರ ದೊರೆಯಬೇಕೆಂಬ ಸದುದ್ದೇಶದಿಂದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಮೀತಿಯ ಕಾರ್ಯ ತುಂಬ ಅರ್ಥಗರ್ಭಿ ತವಾಗಿದೆ ಎಂದರು. ಸುಮಾರು 45 ಕ್ಕೂಹೆಚ್ಚು ಮಕ್ಕಳಿಗೆ ಅಕ್ಕಿತುಂಬಿದ ಪಾತ್ರೆಯಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗಣೇಶ ಪೂಜೆ , ವಿದ್ಯಾಧಿದೇವತೆ ಸರಸ್ವತಿಗೆ ವಿಶೇಷ ಪೂಜೆ ಹಾಗೂ ಅಧ್ಯಯನ ಸಾಮಾಗ್ರಿಗಳಿಗೆ ಪೂಜೆ ಸಲ್ಲಿಸಿ ಶ್ರೀ ಮಹಾಲಕ್ಷ್ಮಿಗೆ ವಿಶೇಷ ಅಭಿಷೇಕ ಅಲಂಕಾರವನ್ನು ಬಿ.ಬಿ.ಸ್ವಾಮಿ, ಶ್ರೀಕಾಂತ ಸ್ವಾಮಿ, ಬಸವರಾಜ ಸ್ವಾಮಿ ನೆರವೇರಿಸಿದರು.
ದೇವಸ್ಥಾನ ಸಮೀತಿಯ ಅಧ್ಯಕ್ಷ ಪನ್ನಲಾಲ ಪಟೇಲ್, ಡಾ.ಮೋಹನರೆಡ್ಡಿ, ಪುರಸಭೆ ಸದಸ್ಯ ಬಾಲಪ್ಪ ದಾಸರಿ ಸೇರಿದಂತೆ ಬಸಪ್ಪ ಸಂಜನೋಳ, ಮಲ್ಲಿಕಾರ್ಜುನ ಕಾಕಲವಾರ, ಗೋಪಾಲ ಕಂದೂರ, ಲಕ್ಷಪ್ಪ ಮಜ್ಜಿಗೆ , ರಾಚಪ್ಪ ಅವಂಟಿ, ಈರಪ್ಪ ಸುತಾರಿ, ವಿಜಯ ಮೇಂಗಜಿ, ಶ್ರೀನಿವಾಸ ಗುಮಡಾಲ, ಗೋಪಾಲ, ಪ್ರವೀಣ ಪಟೇಲ್ ಇದ್ದರು.
