ವಸತಿ ನಿಲಯದಲ್ಲಿ ಆಹಾರ ಸೇವಿಸಿ 28 ವಿದ್ಯಾರ್ಥಿನಿಯರು ಅಸ್ವಸ್ಥ | ವಾಂತಿಯಿಂದ ಬಳಲುತ್ತಿದ್ದ ಯುವತಿಯರು ಆಸ್ಪತ್ರೆಗೆ ದಾಖಲು | ಕ್ರಮಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯ
ಯಾದಗಿರಿ: ಗುರುಮಠಕಲ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಕಾಲೇಜು ವಸತಿ ನಿಲಯದಲ್ಲಿ ಬುಧವಾರ ರಾತ್ರಿ ಆಹಾರ ಸೇವಿಸಿ 30 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಾಧಿಕಾರಿ, ಸಿಬ್ಬಂದಿ ಆರೈಕೆ ಮಾಡುತ್ತಿದ್ದಾರೆ. ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿಗೆ ಶಿಫಾರಸ್ಸು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಒತ್ತಾಯಿಸಿದ್ದಾರೆ. ರಾತ್ರಿ ಊಟ ಸೇವಿಸಿದ ತಕ್ಷಣವೇ ಸುಮಾರು 28 ವಿದ್ಯಾರ್ಥಿನಿಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು, ಆತಂಕಕಾರಿ ಮತ್ತು ದುಃಖಕರ ಸಂಗತಿ ಎಂದು ಖಂಡಿಸಿದ್ದಾರೆ.
ಈ ಗಂಭೀರ ವೈಫಲ್ಯಕ್ಕೆ ಜಿಲ್ಲಾಧಿಕಾರಿ ಹಂತದ ಮೇಲ್ವಿಚಾರಣಾ ದೌರ್ಬಲ್ಯ, ಜೊತೆಗೆ ಗುರುಮಠಕಲ್ ತಾಲೂಕು ವಿಸ್ತರಣಾಧಿಕಾರಿ, ವಸತಿ ನಿಲಯದ ವಾರ್ಡನ್, ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ನೇರ ಜವಾಬ್ದಾರರಾಗಿದ್ದಾರೆ. ತಕ್ಷಣವೇ ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.
ವಸತಿ ನಿಲಯದ ಅಸಮರ್ಪಕ ನಿರ್ವಹಣೆಗೆ ಕಾರಣರಾದ ಸಿಬ್ಬಂದಿಯನ್ನು ತಕ್ಷಣವೇ ವರ್ಗಾವಣೆ ಮಾಡಬೇಕು. ಈ ಘಟನೆಗೆ ನೇರ ಕಾರಣರಾದವರ ಮೇಲೆ ತಕ್ಷಣವೇ FIR ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು. ಘಟನೆಯ ಕುರಿತು ಜಿಲ್ಲಾಧಿಕಾರಿ ಸ್ವತಃ ಮೇಲ್ವಿಚಾರಣೆಯೊಂದಿಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು.
ವಿದ್ಯಾರ್ಥಿನಿಯರ ಜೀವ–ಭದ್ರತೆ ಸರ್ಕಾರದ ಅತ್ಯಂತ ಪ್ರಮುಖ ಜವಾಬ್ದಾರಿ. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಅವಶ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
