ಯಾದಗಿರಿಯಲ್ಲಿ 486ನೇ ವೀರ ಶಿರೋಮಣಿ ಮಹಾರಾಣಾ ಪ್ರತಾಪ್ ಸಿಂಹ ಜಯಂತಿ ಸಂಭ್ರಮ
ಯಾದಗಿರಿ: ಜಿಲ್ಲಾ ರಾಜಪೂತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವೀರ ಶಿರೋಮಣಿ ಮಹಾರಾಣಾ ಪ್ರತಾಪ್ ಸಿಂಹ ಅವರ 486ನೇ ಜಯಂತೋತ್ಸವವನ್ನು ಭಕ್ತಿ, ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಣಾ ಪ್ರತಾಪ್ ಸಿಂಹ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಹಾಗೂ ಯುವಕರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಸಮಾಜದ ಬಂಧು-ಬಾಂಧವರು ಜಯಕಾರಗಳನ್ನು ಕೂಗಿ ಮಹಾರಾಣಾ ಪ್ರತಾಪ್ ಅವರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಡಾ. ಸಂಜೀವ್ ಕುಮಾರ್ ರಾಯಚೂರಕರ್ ಅವರು, ಸಮಸ್ತ ಜಿಲ್ಲೆಯ ರಾಜಪೂತ ಸಮಾಜದ ಬಂಧುಗಳಿಗೆ ಮಹಾರಾಣಾ ಪ್ರತಾಪ್ ಸಿಂಹ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ಸಮಾಜದ ಅಭಿವೃದ್ಧಿ, ಶಿಕ್ಷಣ ಮತ್ತು ಧಾರ್ಮಿಕ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು.
ಇದೇ ವೇಳೆ ಜಿಲ್ಲೆಯಲ್ಲೇ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಗೌರವಿಸಲು ಮುಂಬರುವ ತಿಂಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಗೌರವಾಧ್ಯಕ್ಷರಾದ ಅಮರಸಿಂಗ್ ಠಾಕೂರ್, ಗುರುಮಠಕಲ್ ತಾಲೂಕು ಅಧ್ಯಕ್ಷ ಸತ್ಯನಾರಾಯಣ ತಿವಾರಿ, ವಿಕ್ರಮಸಿಂಗ್ ಗೌತಮ್, ಸಂದೀಪ್ ಹಜಾರೆ, ಗೋಪಾಲ್ ಸಿಂಗ್ ತಿವಾರಿ, ಸಚಿನ್ ಸಿಂಗ್, ವಿಜಯ್ ಸಿಂಗ್, ಭಗವಾನ್ ಸಿಂಗ್ ಠಾಕೂರ್, ದತ್ತು ಸಿಂಗ್ ಠಾಕೂರ್, ಭೈರವ ಸಿಂಗ್ ರಾಯಚೂರಕರ್ ಸೇರಿದಂತೆ ಅನೇಕ ಸಮಾಜದ ಮುಖಂಡರು ಹಾಗೂ ಬಂಧು-ಬಾಂಧವರು ಉಪಸ್ಥಿತರಿದ್ದರು.
