ಕುಂಬಾರೋಳ ಮಠದಿಂದ ಮುಖ್ಯ ಬೀದಿಯಲ್ಲಿ ಸಂಚರಿಸಿದ ರಥ ಯಾತ್ರೆ | ಮೊಳಗಿತು ಜೈ ಜಗನ್ನಾಥ ಘೋಷಣೆ
ಗುರುಮಠಕಲ್: ಮಳೆಗಾಲ ಆರಂಭವಾಗಿ ತಿಂಗಳೇ ಕಳೆಯುತ್ತಿರುವ ಹೊತ್ತಿನಲ್ಲಿ ಜಗನ್ನಾಥನ ಕೃಪೆ ಎಂಬಂತೆ ಸುಮಾರು 20 ನಿಮಿಷ ಧಾರಾಕಾರ ಮಳೆ ಸುರಿದಿದ್ದು, ಇದೀಗ ಮಳೆಗಾಲದಂತೆ ಭಾಸವಾಗುತ್ತಿದೆ.
ಇಸ್ಕಾನ್ ನಿಂದ ಹಲವೆಡೆ ಈಗಾಗಲೇ ಭವ್ಯವಾದ ಜಗನ್ನಾಥ ರಥ ಯಾತ್ರೆಗಳು ನಡೆದಿವೆ. ಅದರಂತೆ ಗುರುಮಠಕಲ್ ನಲ್ಲಿಯೂ ಸಹ ವರುಣನ ತೀವ್ರ ಆರ್ಭಟದ ನಡುವೆಯೂ ಪ್ರಸಿದ್ಧ ಜಗನ್ನಾಥನ ರಥೋತ್ಸವವು ಭಕ್ತರ ಅಚಲ ಶ್ರದ್ಧೆ ಮತ್ತು ಅಪಾರ ಉತ್ಸಾಹದೊಂದಿಗೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ರಥಯಾತ್ರೆ ಯುದ್ಧಕ್ಕೂ ಭಗವಾನ್ ಜಗನ್ನಾಥನ ದರ್ಶನ ಪಡೆಯಲು ಭಕ್ತರು ಆಗಮಿಸಿದ್ದರು. “ಜೈ ಜಗನ್ನಾಥ್” ಎಂಬ ಗಗನಚುಂಬಿ ಜಯಘೋಷಗಳ ನಡುವೆ, ಭಕ್ತರು ಮಳೆಯಲ್ಲಿ ಸಂಪೂರ್ಣವಾಗಿ ನೆನೆಯುತ್ತಲೇ ಭಕ್ತಿ ಪರಾಕಾಷ್ಠೆ ಯಿಂದ ರಥದ ಹಗ್ಗವನ್ನು ಎಳೆದರು.
ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು, ಭಕ್ತರ ಉತ್ಸಾಹಕ್ಕೆ ಯಾವುದೇ ಭಂಗ ಬರಲಿಲ್ಲ. ಗುರುಮಠಕಲ್ ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಈ ಮಳೆಯನ್ನು ದೇವರ ಆಶೀರ್ವಾದವೆಂದೇ ಭಾವಿಸಿ ಸಂಭ್ರಮಿಸಿದರು.
