ಅದ್ಧೂರಿ ಆಚರಣೆಯಲ್ಲಿ ಮುಖ್ಯ ಗುರು ಕೆ.ಮೊಗಲಪ್ಪ ಅವರಿಂದ ಧ್ವಜಾರೋಹಣ | ವಿಶ್ವಕರ್ಮ ಜಯಂತಿ ಆಚರಣೆ
ಗುರುಮಠಕಲ್: ಹೈದರಾಬಾದ್ ಸಂಸ್ಥಾನ ಭಾರತಕ್ಕೆ ಸೇರಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರೂವಾರಿ. ಅವರ ಕಾರ್ಯ ಯೋಜನೆಗಳು ಜೊತೆಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ದೃಢ ನಿರ್ಧಾರದಿಂದ ಸೇನೆ ಈ ಪ್ರಾಂತ್ಯವನ್ನು ಆಪರೇಷನ್ ಪೊಲೋ ಮೂಲಕ ವಶ ಪಡೆಯಿತು ಎಂದು ಮುಖ್ಯ ಗುರು ಕೆ.ಮೊಗಲಪ್ಪ ಹೇಳಿದರು.
ತಾಲೂಕಿನ ಯಲ್ಹೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು, ಅಖಂಡ ಭಾರತ ಕಟ್ಟಿದ ಮಹಾನ್ ನೇತಾರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಕೃತಜ್ಞರಾಗಿರಬೇಕು. ಈ ಭಾಗದ ಹೋರಾಟಗಾರ ಸ್ಮರಿಸಿದರು.
ನಮ್ಮ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರು... ಕೌಳೂರು ಮಲ್ಲಪ್ಪ, ವಿಶ್ವನಾಥ ರೆಡ್ಡಿ ಮುದ್ನಾಳ, ವಿದ್ಯಾಧರ ಗುರುಜಿ, ಭಟ್ಟದ, ರಾಮರೆಡ್ಡಿ ಪಾಟೀಲ್, ಕಿಶನ್ ರಾವ್ ಮಹೇಂದ್ರಕರ್, ಡಿ.ಆರ್. ಆನಂದಿ, ಜಗನ್ನಾಥರಾವ ಚಂಡರಕಿ, ಪೆಂಟೋಜಿ, ಸೇಡಂ ತಾಲೂಕಿನ ತುಳಜಾರಾಮ ಖೇವಜಿ ಸೇರಿ ಇನ್ನೂ ಹಲವರು ಹೋರಾಡಿದ್ದಾರೆ.
ವಚನ ಸಾಹಿತ್ಯ ನೀಡಿದ ಶರಣರ ನಾಡು ನಮ್ಮ ಭಾಗದ ಕಲ್ಯಾಣ ಕರ್ನಾಟಕ ಹೆಸರು ನೀಡಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ನಾವು ಮುಂದಿದ್ದೇವೆ. ಇತರೆ ವಿಭಾಗಗಳಿಗೆ ಹೋಲಿಸಿದರೆ ಕ.ಕ. ಮೇರು ಇತಿಹಾಸ, ಸಂಪತ್ಭರಿತ ನಾಡು ನಮ್ಮದು ಎಂದು ಹೆಮ್ಮೆಯ ವಿಷಯ ಎಂದರು.
ಶಿಕ್ಷಕ ಬಸವರಾಜ ಮಾತನಾಡಿ, ಸ್ವಾತಂತ್ರ್ಯ ನಂತರ ಕಲ್ಯಾಣ ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಯಾಗಿತ್ತು. ಸಂಭ್ರಮ ಆಚರಣೆ ಮಾಡುವವರನ್ನು ನಿಜಾಮ ತನ್ನ ಖಾಸಗಿ ಸೇನೆ ಕಳಿಸಿ ತೊಂದರೆ ನೀಡುತ್ತಿದ್ದ ಎಂದರು. ಬೀದರ್ ಜಿಲ್ಲೆಯ ಗೋಟಾ ಹತ್ಯಾಕಾಂಡ ನಡೆಯಿತು ಎಂದು ವಿವರಿಸಿದರು. ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಡಾ. ಅಂಬೇಡ್ಕರ್ ಇತರರು ಜೊತೆ ಚರ್ಚೆ ನಡೆಸಿ, ಆಪರೇಷನ್ ಪೊಲೋ ನಡೆಸಿ, ರಜಾಕಾರರ ಹಿಮ್ಮೆಟ್ಟಿಸಿದ ಕುರಿತು ವಿವರಿಸಿದರು.
ಹಿರಿಯ ಶಿಕ್ಷಕ ಹುಸೇನಪ್ಪ ಸಕ್ರಿ ಮಾತನಾಡಿ, 565 ದೇಶಿಯ ಸಂಸ್ಥಾನಗಹಿದ್ದವು, ಬ್ರಿಟಿಷರು ಯಾರು ಯಾವ ದೇಶಕ್ಕೆ ಸೇರುತ್ತಿರೋ ಅದರಲ್ಲಿ ಸೇರಲು ಅವಕಾಶ ನೀಡಿದ್ದರು. ದೇಶ ಇಬ್ಭಾಗವಾದ ಸಂದರ್ಭದಲ್ಲಿ ಎಲ್ಲಾ ಸಣ್ಣ ಸಂಸ್ಥಾನಗಳು ಭಾರತ ಸೇರಿದವು. ಝುನಾಘಡ, ಜಮ್ಮು ಕಾಶ್ಮೀರ, ಹೈದರಾಬಾದ್ 3 ಸಂಸ್ಥಾನದ ಭಾರತ ಸೇರಲು ಒಪ್ಪಿರಲಿಲ್ಲ. ಸೇನಾ ಪಡೆಗಳನ್ನು ಕಳಿಸಲು ಭಾರತ ಸರ್ಕಾರ ಆಲೋಚನೆಯಿದ್ದಾಗ ರಜಾಕಾರರು ಬೇರೆ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದ ಎಂದು ವಿವರಿಸಿದರು.
ಅತಿಥಿ ಶಿಕ್ಷಕಿ ಶ್ರೀದೇವಿ ಮಾತನಾಡಿದರು. ಶಿಕ್ಷಕರಾದ ಟಿ. ರಾಮುಲು, ಶಾಂತಪ್ಪ ಯಾಳಗಿ, ಅತಿಥಿ ಶಿಕ್ಷಕರಾದ ಮುಸ್ಕಾನ್, ಅನೀಲ ಕುಮಾರ, ಪ್ರಶಿಕ್ಷಣಾರ್ಥಿ ಭಾರ್ಗವಿ, ಅಶ್ವಿನಿ, ಸರೋಜಮ್ಮ, ಸೌಭಾಗ್ಯಮ್ಮ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
