ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯ | ಟ್ರಾನ್ಸ್ಫಾರ್ಮರ್ ಶಾಕ್ ನಿಂದ ಹಸು, ಹಂದಿ ಸಾವು | ದಸಂಸಯಿಂದ ಜಿಲ್ಲಾಡಳಿತಕ್ಕೆ ದೂರು | ಅಶೋಕ ಶನಿವಾರಂ ಮಾಹಿತಿ
ಗುರುಮಠಕಲ್: ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿ ಗ್ರಾಮದ ಬಳಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಶಾಕ್ ತಗುಲಿ ಹಸು ಹಾಗೂ ಹಂದಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಘಟನೆಯ ಕುರಿತು ತನಿಖೆ ನಡೆಸಿ ಸೂಕ್ತ ಪರಿಹಾರ ಒದಗಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಅಶೋಕ್ ಶನಿವಾರಂ ಆಗ್ರಹಿಸಿದ್ದಾರೆ.
ಮಳೆಯ ಆರಂಭದ ಈ ಸಮಯದಲ್ಲಿ ಟ್ರಾನ್ಸ್ಫಾರ್ಮರ್ ಸುತ್ತಲೂ ಸೂಕ್ತ ರಕ್ಷಣಾ ಬೇಲಿ / ಸುರಕ್ಷತಾ ತಂತಿ ಅಳವಡಿಸದೇ ಇರುವುದರಿಂದ ಈ ದುರ್ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೆಲವು ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಹಾನಿಗೊಳಗಾಗಿರುವುದು ಮತ್ತು ತಂತಿಗಳು ಜೋತುಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಅದೇ ಪ್ರದೇಶದಲ್ಲಿ ಇನ್ನೂ ಸುಮಾರು 8 ರಿಂದ 10 ಟ್ರಾನ್ಸ್ಫಾರ್ಮರ್ಗಳು ರಕ್ಷಣಾ ವ್ಯವಸ್ಥೆಯಿಲ್ಲದೇ ಇರುವುದರಿಂದ ಗ್ರಾಮಸ್ಥರು ಭಯ ಮತ್ತು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಘಟನೆಯ ಸ್ಥಳಕ್ಕೆ ತಕ್ಷಣ ಉನ್ನತ ಮಟ್ಟದ ಅಧಿಕಾರಿಗಳ ತಂಡವನ್ನು ಕಳುಹಿಸಿ ಪರಿಶೀಲನೆ ನಡೆಸಬೇಕು, ಮೃತ ಹಸುವಿನ ಮಾಲೀಕರಿಗೆ ಸರ್ಕಾರದ ನಿಯಮಾನುಸಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು, ಎಲ್ಲಾ ಅಪಾಯಕಾರಿ ಟ್ರಾನ್ಸ್ಫಾರ್ಮರ್ ಗಳಿಗೆ ತಕ್ಷಣ ಸುರಕ್ಷತಾ ಬೇಲಿ / ರಕ್ಷಣಾ ತಂತಿ ಅಳವಡಿಸಬೇಕು.
ಹಾನಿಗೊಂಡ ವಿದ್ಯುತ್ ಕಂಬಗಳು ಹಾಗೂ ಜೋತುಬಿದ್ದ ತಂತಿಗಳನ್ನು ತುರ್ತುವಾಗಿ ದುರಸ್ತಿ ಮಾಡಬೇಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿಯಮಿತ ಪರಿಶೀಲನೆ ಮತ್ತು ನಿರ್ವಹಣೆಗೆ ಜೆಸ್ಕಾಂ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ತಕ್ಷಣ ಹಾಗೂ ಶಾಶ್ವತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
