5 ರಿಂದ 6 ತಿಂಗಳ ಗಂಡು ಭ್ರೂಣ ಪತ್ತೆ : ಉಪ್ಪರಗಡ್ಡಕ್ಕೆ ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ
ಗುರುಮಠಕಲ್: ಪಾಪ ಏನು ಅರಿಯದ ಮಗುವಿನ ಪ್ರಾಣ ತೆಗೆದ ಕ್ರೂರಿ ತಾಯಿ, ಮಗು ಬೇಡವಾಗಿದ್ದರೇ ಯಾರಿಗಾದ್ರೂ ಕೊಡಬೇಕಿತ್ತು. ಹೀಗೆ ಮಾಡಬಾರದಿತ್ತು ಎಂದು ಮಹಿಳೆಯರೆಲ್ಲಾ ತಾಯಿಗೆ ಹಿಡಿಶಾಪ ಹಾಕುತ್ತಿರುವ ದೃಶ್ಯ ಕಂಡು ಬಂತು…!
ಹೌದು, ಮಕ್ಕಳಿಲ್ಲದವರು ಅದೆಷ್ಟೋ ದೇವರಿಗೆ ಬೇಡಿಕೊಳ್ಳುತ್ತಾರೆ. ಲೆಕ್ಕವಿಲ್ಲದಷ್ಟು ಹರಿಕೆ ಹೊರುತ್ತಾರೆ. ಆದರೆ ನಿರ್ದಯಿ ತಾಯಿಯೊಬ್ಬಳು ಇಲ್ಲಿ ಜಗತ್ತು ಅರಿಯುವ ಮುನ್ನವೇ ಹಸುಗೂಸನ್ನು (ಗಂಡು ಭ್ರೂಣ) ಎಸೆದು ಹೋಗಿರುವ ಹೃದಯ ಕಲಕುವ ಘಟನೆ ಬೆಳಕಿಗೆ ಬಂದಿದೆ.
ಗುರುಮಠಕಲ್ ಪಟ್ಟಣದ ಹೃದಯ ಭಾಗ ಉಪ್ಪರಗಡ್ಡ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಭೀಮಮ್ಮ ಎಂಬುವವ ಮನೆಯ ಹಿಂದೆ ಯಾರೋ ಅಪರಿಚಿತರು ಸುಮಾರು 5-6 ತಿಂಗಳ ಅಂಗಾಂಗ ಬೆಳೆದ ಗಂಡು ಮಗುವಿನ ಭ್ರೂಣ ಎಸೆದು ಹೋಗಿದ್ದಾರೆ. ಇದು ಹಲವು ಆಯಾಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆರೋಗ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಭೇಟಿ : ಘಟನೆಯ ಕುರಿತು ಸಾರ್ವಜನಿಕರು ಸಾಮಾಜಿಕ ಹೋರಾಟಗಾರ ನರಸಿಂಹಲು ಗಂಗನೋಳ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸೂಕ್ತ ತನಿಖೆ, ಕ್ರಮವಾಗಲಿ : ಕಳೆದ ಕೆಲ ತಿಂಗಳಿಂಗಳಲ್ಲೇ 2 ಭ್ರೂಣ ಹತ್ಯೆ ಇದಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಹಿಸಬೇಕು ಎಂದು ದಲಿತ ಸಂಘಟನೆ ಮುಖಂಡ ಅಶೋಕ್ ಶನಿವಾರಂ, ಹೋರಾಟಗಾರ ನರಸಿಂಹಲು ಗಂಗನೋಳ್ ಒತ್ತಾಯಿಸಿದ್ದಾರೆ.
