ಧರ್ಮಸ್ಥಳ ಹೆಸರಿಗೆ ಕಳಂಕ ತರುವ ಕಾರ್ಯಕ್ಕೆ ತೀವ್ರ ಖಂಡನೆ | ಯಾದಗಿರಿಯಲ್ಲಿ ಜಾತಿಭೇದ ಮರೆತು ಪ್ರತಿಭಟಿಸಿದ ಭಕ್ತರು
ಯಾದಗಿರಿ: ಇಡೀ ರಾಜ್ಯದಲ್ಲಿ ಸಾಮಾಜಿಕ ಕಾಳಜಿಯಿಂದ ದೇವಾಲಯಗಳ ಜೀರ್ಣೋದ್ಧಾರ, ಸ್ತ್ರೀ ಸಬಲೀಕರಣ, ವೈಯಕ್ತಿಕ ಸೌಲಭ್ಯ ನೀಡುವ ಮೂಲಕ ಬಡವರ ಜೀವನ ಮಟ್ಟ ಸುಧಾರಿಸಲು ಹಗಲಿರುಳು ಶ್ರಮಿಸುತ್ತಿರುವ ಧರ್ಮಸ್ಥಳ ಮಂಜುನಾಥ ಕ್ಷೇತ್ರದ ಹೆಸರು ಕೆಡಿಸುವ ಷಡ್ಯಂತ್ರವನ್ನು ಎಂದಿಗೂ ಸಮಾಜ ಸಹಿಸಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಅಭಿಮಾನಿಗಳ ವೇದಿಕೆಯಿಂದ ನಗರದ ನೇತಾಜಿ ಸರ್ಕಲ್ ದಿಂದ ಮೆರವಣಿಗೆ ಮೂಲಕ ಹೊರಟು, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅನಾಮಧೇಯ ವ್ಯಕ್ತಿ ದೂರು ಹಿನ್ನೆಲೆ ಸರ್ಕಾರ ಎಸ್ ಐಟಿ ರಚಿಸಿ ತನಿಖೆಗೆ ಆದೇಶಿಸಿರುವುದು ಸ್ವಾಗತ. ಸತತ ತನಿಖೆಯಲ್ಲಿ ಏನು
ಸಿಕ್ಕಿದೆ? ಇನ್ನು ಯಾವುದೇ ಸತ್ಯಾಸತ್ಯತೆ ತಿಳಿಯದೇ ಸಾರ್ವಜನಿಕವಾಗಿ ಧರ್ಮಸ್ಥಳ ಸಂಸ್ಥೆ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಹೆಸರಿಗೆ ಕಳಂಕ ತರಲು ಷಡ್ಯಂತ್ರಕ್ಕೆ ನಡೆಯುತ್ತಿದೆ. ಸುಳ್ಳು ಹರಿಬಿಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದರು.
ಜಾತಿ ಭೇದ ಮರೆತು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. ಬಿಜೆಪಿ ಹಿರಿಯ ನಾಯಕಿ ನಾಗರತ್ನ ಕುಪ್ಪಿ, ಹಿಂದು ಯುವ ಮುಖಂಡ ವಿಜಯ ಪಾಟೀಲ್, ನಗರ ಸಭೆ ಮಾಜಿ ಅಧ್ಯಕ್ಷೆ ನಾಗರತ್ನ ಮೂರ್ತಿ, ಪತ್ರಕರ್ತರ ವೈಜನಾಥ ಹಿರೇಮಠ, ಅವಂತಿಕ ಆವುಂಟಿ, ಶಾರದಾ ಕಡೇಚೂರ, ಸ್ವಾಮಿ ದೇವಾ ದಾಸನಕೇರಿ, ನಾಗರಾಜ ಬೀರನಾಳ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಇದ್ದರು.
