ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಭೆ | ಸಮಿತಿ ಸದಸ್ಯ ಮರೆಪ್ಪ ಚಟ್ಟರಕರ್ ಸೇರಿ ಅಧಿಕಾರಿಗಳು ಭಾಗಿ
ಗುರುಮಠಕಲ್: ಪರಿಶಿಷ್ಟ ಸಮುದಾಯಗಳ ಸಮಸ್ಯೆಯನ್ನು ಆಲಿಸಿ ಕಾನೂನು ಪ್ರಕಾರ ಪರಿಹಾರಕ್ಕೆ ಸಂಬಂಧ ಅಧಿಕಾರಿಗಳು ಕ್ರಮವಹಿಸುವರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.
ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು ಅವರ ವ್ಯಾಪ್ತಿಯ ಸೌಕರ್ಯ ಕಲ್ಪಿಸುವರು. ದೌರ್ಜನ್ಯ ಪ್ರಕರಣಗಳು ತಡೆಯಲು ತ್ವರಿತವಾಗಿ ಕ್ರಮವಹಿಸಲಾಗುತ್ತಿದೆ ಎಂದರು. ಹಬ್ಬಗಳು ಸಾಮರಸ್ಯದಿಂದ ಆಚರಣೆ ಮಾಡಬೇಕು. ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಮೋಹರಂ ನಿಷೇಧ ಮಾಡಲಾಗಿದೆ. ಈ ಹಿಂದಿನ ಪ್ರಕರಣದ ಆರೋಪಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ದೌರ್ಜನ್ಯ ತಡೆ ಸಮಿತಿ ಸದಸ್ಯ ಮರೆಪ್ಪ ಚಟ್ಟರಕರ್ ಮಾತನಾಡಿ, ಗ್ರಾಮೀಣ ಭಾಗದ ಜನರಿಂದಲೇ ಸಮಸ್ಯೆ ಅರಿಯಲು ಎಸ್ಪಿ ಅವರು ಕಾಳಜಿವಹಿಸಿ ಸಮುದಾಯದವರು ಜನರಿದ್ದಲ್ಲೇ ಸಭೆ ನಡೆಸುತ್ತಿದ್ದಾರೆ. ಸಮಸ್ಯೆಗೆ ಸ್ಪಂದಿಸಿ ತಕ್ಷಣ ಬಗೆಹರಿಸುವ ಉದ್ದೇಶವಾಗಿದೆ.
ಗಾಜರಕೋಟನಲ್ಲಿ ಅಸ್ಪೃಶ್ಯತೆಯಂತ ಸಮಸ್ಯೆ ಇಲ್ಲದಿರುವುದು ಸಂತಸ. ಆದರೇ ಮೂಲಸೌಕರ್ಯ ಸಮಸ್ಯೆಯಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಸಭೆ ಗಮನಕ್ಕೆ ತಂದು ಬಗೆಹರಿಸಬೇಕು ಎಂದರು. ಮಹಿಳಾ ಶೌಚಾಲಯ, ಸ್ಮಶಾನ ಭೂಮಿ ಹದ್ದುಬಸ್ತು ಮಾಡಿ ಕೊಡಬೇಕು ಎಂದು ಮನವಿ ಮಾಡಿದರು. ಸಭೆ ಹೊರತು ಪಡಿಸಿಯೂ ಸಮಸ್ಯೆ ಗಮನಕ್ಕೆ ತಂದರೆ ಅಧಿಕಾರಿಗಳು ಸ್ಪಂದಿಸುವವರಿದ್ದಾರೆ.
ಸ್ಥಳೀಯ ಮಹೇಶ ಮಾತನಾಡಿ, ನೀರು, ಚರಂಡಿ ವ್ಯವಸ್ಥೆ ಯಾರು ಕೇಳುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗುರುವಾರದ ವರೆಗೆ ಬಗೆಹರಿಸುವ ಭರವಸೆ ಅಧಿಕಾರಿಗಳು ನೀಡಿದರು. ಚಂದ್ರಶೇಖರ ಮಾತನಾಡಿ, ಗ್ರಂಥಾಲಯ ವ್ಯವಸ್ಥೆ, ಸಮುದಾಯದ ಭವನ ನಿರ್ಮಾಣ ಮಾಡಲು ಮನವಿ ಮಾಡಿದರು.
ಡಿವೈಎಸ್ಪಿ ಸುರೇಶ ಎನ್, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಪಿಐ ದೌಲತ್ ಎನ್ ಕೆ, ಶಿವಕುಮಾರ ಬಿರಾದಾರ, ಮಲ್ಲಿಕಾರ್ಜುನ ಸಜ್ಜನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಮುದಾಯದ ಮುಖಂಡರು, ಮಹಿಳೆಯರು ಹಾಗೂ ಯುವಕರು ಇದ್ದರು.
