ಯಾದಗಿರಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಕಾನ್ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯು ಯಾದಗಿರಿ ಜಿಲ್ಲೆಯಾದ್ಯಂತ ಆಗಸ್ಟ್ 2 ರಂದು ಸುಸೂತ್ರ, ಶಾಂತಿಯುತವಾಗಿ ಜರುಗಿವೆ.
ಯಾದಗಿರಿ ಜಿಲ್ಲೆಯ 19 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಎರಡು ಹಂತಗಳಲ್ಲಿ (ಬೆಳಿಗ್ಗೆ 10:30 ರಿಂದ 12:00 ಮತ್ತು ಸಾಯಂಕಾಲ 4:00 ರಿಂದ 5:30) ನಡೆದಿದ್ದು, ಪರೀಕ್ಷೆಯ ಬೆಳಗಿನ ಅವಧಿಯಲ್ಲಿ ಒಟ್ಟು 7979 ಅಭ್ಯರ್ಥಿಗಳಲ್ಲಿ 7672 ಅಭ್ಯರ್ಥಿಗಳು ಹಾಜರಾಗಿದ್ದು 307 ಗೈರು ಹಾಜರಿರುತ್ತಾರೆ, ಸಾಯಂಕಾಲದ ಅವಧಿಯಲ್ಲಿ ಒಟ್ಟು 6592 ಅಭ್ಯರ್ಥಿಗಳಲ್ಲಿ 6371 ಅಭ್ಯರ್ಥಿಗಳು ಹಾಜರಾಗಿದ್ದು 221 ಗೈರು ಹಾಜರಾಗಿದ್ದಾರೆ.
ಪರೀಕ್ಷೆಯನ್ನು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳು, ಗೌಪ್ಯತಾ ನಿಯಮಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿಪಾಲಿಸಿ ಯಶಸ್ವಿಯಾಗಿ ನಡೆಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್, ವೈದ್ಯಕೀಯ ಸೌಲಭ್ಯ, ಕುಡಿಯುವ ನೀರು, ವಿದ್ಯುತ್ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗಿತ್ತು.
ಜಿಲ್ಲಾ ಆಡಳಿತದ ಸಮನ್ವಯದಲ್ಲಿ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಜೆಸ್ಕಾಂ,ಸಾರಿಗೆ ಇಲಾಖೆ ಹಾಗೂ ಇತರೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರದಿಂದ ಪರೀಕ್ಷೆಯನ್ನು ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
