ರೈತ ಸಂಘಗಳ ಮುಖಂಡರು, ಪದಾಧಿಕಾರಿಗಳು ಸಭೆಯಲ್ಲಿ ಭಾಗಿ | ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ
ಯಾದಗಿರಿ: ಜಿಲ್ಲೆಯ ರೈತರ ತುರ್ತು ಸಮಸ್ಯೆಗಳ ನಿವಾರಣೆಗೆ ವಿಶೇಷ ಗಮನ ಹಾಗೂ ಇತರೆ ಸರ್ಕಾರದ ಹಂತದಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ರೈತರ ಸಮಸ್ಯೆಗಳ ನಿವಾರಣೆ ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ರೈತಪರ ಸಂಘಟನೆ ಗಳಿಂದ ಇಂದು ಕುಂದುಕೊರತೆ ಅಹವಾಲು ಸ್ವೀಕರಿಸಲಾಗಿದೆ. ಎಲ್ಲ ಸಮಸ್ಯೆಗಳ ಬಗ್ಗೆ ಗಮನಿಸಲಾಗಿದ್ದು, ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ನಿವಾರಣೆಗೆ ಅವಶ್ಯಕ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.
ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿನ ಕುಂದುಕೊರತೆಗಳನ್ನು ಆಯಾ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿನಿವಾರಿಸಲಾಗುವುದು. ಸರ್ಕಾರದ ಹಂತದಲ್ಲಿ ಆಗಬೇಕಾದ ಕ್ರಮಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು.ತುರ್ತು ಸಮಸ್ಯೆಗಳ ಬಗ್ಗೆಯೂ ಗಮನನೀಡಲಾಗುವದೆಂದ ಅವರು ಎಲ್ಲ ರೈತರು ಸಹಕಾರ ದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವದೆಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ್ ಅವರು, ಮಧ್ಯಪ್ರಾಚ್ಯ ಯುದ್ದದಿಂದಾಗಿ ರಸಗೊಬ್ಬರಕ್ಕೆ ಬೇಕಾದಸಾಮಗ್ರಿಗಳ, ರಸಗೊಬ್ಬರಗಳ ಕೊರತೆಯಾಗಿದೆ. ದಾಸ್ತಾನು ಅನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಪ್ರತಿದಿನದ ರಸಗೊಬ್ಬರ ಸ್ಟಾಕ್ ಬಗ್ಗೆ ಮಾಹಿತಿ ಫಲಕ ಅಳವಡಿಸಲು ಸಂಬಂಧಪಟ್ಟ ಕೃಷಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸರ್ಕಾರದ ಹಂತದಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಯಾವುದೇ ಡೀಲರ್ ಗಳ ಅಥವಾ ಮಾಲೀಕರಿಂದ ಲಿಂಕನ್ನು ರೈತರು ಪಡೆಯಬಾರದು ಎಂದು ತಿಳಿಸಿದರು.
ಸಭೆಯಲ್ಲಿ ರೈತಪರ ಸಂಘಟನೆಗಳ ಮುಖಂಡರಾದ ಕಾಂತು ಪಾಟೀಲ್, ಶಾಂತು ಮಂದಾರವಾಡ, ಮಲ್ಲಣಗೌಡರ ಹಗರಟಗಿ,ಮಹಾವೀರ ಲಿಂಗೇರಿ,ಚನ್ನಪ್ಪ ಆನೆಗುಂದಿ,ರಾಜುಗೌಡ ಚಾಮ್ನಳ್ಳಿ, ಮಹಾದೇವಪ್ಪ ಕಡಕಲ್, ಅವರು ನಕಲಿ ಬೀಜ, ರಸಗೊಬ್ಬರ ಮಾರಾಟಗಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು, ರಸಗೊಬ್ಬರಗಳ ಸಮಾನ ಹಂಚಿಕೆ, ಕೆಬಿಜೆ ಎನ್ ಎಲ್ ಸಲಹಾ ಸಮಿತಿಗೆ ಜಿಲ್ಲೆಯಿಂದ ರೈತ ಸಂಘಟನೆಗಳ ತಲಾ ಒಬ್ಬ ರೈತರನ್ನು ಸದಸ್ಯರಾಗಿ ನಿಯೋಜನೆಗೆ ಕ್ರಮ, ಕುಡಿಯುವ ನೀರು ಹಾಗೂ ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ ಗ್ರಾಮ ಪಂಚಾಯತ್ ಪಿಡಿಓ ಗಳ ಮೇಲೆ ಕ್ರಮ, ಕಳೆದ ವರ್ಷ ಆದ ಅತಿವೃಷ್ಟಿ ಪರಿಹಾರ ನೀಡಲು, ಕೆರೆ ಒತ್ತುವರಿ ತೆರವು, ಕಬ್ಬಿನ ಬಾಕಿ ಬಿಲ್ ಪಾವತಿ, ಇತರೆ ಸಮಸ್ಯೆ ಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
