ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ | ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಿಂದ ಉದ್ಘಾಟನೆ
ಯಾದಗಿರಿ: ಪತ್ರಿಕೋದ್ಯಮದಲ್ಲಿ ಯಾರು ಏನೇ ಟೀಕೆ ಟಿಪ್ಪಣಿ ಮಾಡಿದರೂ ಕೂಡ ಪತ್ರಕರ್ತರು ವೃತ್ತಿ ಧರ್ಮಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ವೃತ್ತಿ ಧರ್ಮವನ್ನು ಕಾಪಾಡಲು ಮುಂದಾಗಬೇಕಿದೆ. ಅಂದಾಗಲೇ ನೈಜ ಪತ್ರಿಕೋದ್ಯಮ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪ್ರಮುಖವಾಗಿ ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಬೇಕಿದೆ. ನೈಜ ಪತ್ರಕರ್ತರು ಕಳೆದು ಹೋಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕೇಂದ್ರಗಳಲ್ಲಿ ಭವನಗಳು ನಿರ್ಮಾಣ ಮಾಡಬೇಕು. ಇದರಿಂದಾಗಿ ತುಂಬ ಅನುಕೂಲವಾಗುತ್ತದೆ ಎಂಬುದು ಮರೆಯಬಾರದು ಎಂದರು. ಸಂಘದ ಪದಾಧಿಕಾರಿಗಳಾಗಿ ಕೆಲಸ ಮಾಡಲು ಆಗದಿದ್ದವರು ರಾಜೀನಾಮೆ ಕೊಟ್ಟು ಹೋಗಿ ಏನೂ ಬೇಜಾರಿಲ್ಲ. ಸದಸ್ಯರಾಗಲು ಆಸಕ್ತಿಯಿಂದ ಬಂದವರು ನಂತರ ಬೇಜವಾಬ್ದಾರಿ ತೋರುವುದು ಸರಿಯಲ್ಲ. ಪತ್ರಕರ್ತರಲ್ಲದ ಹಾಗೂ ಸಂಘದ ವಿರುದ್ಧ ನಡವಳಿಕೆ ಮತ್ತು ಚಟುವಟಿಕೆ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘದ ಸದಸ್ಯರಾಗಲು ಬಹಳಷ್ಟು ನೈಜ ಪತ್ರಕರ್ತರಿದ್ದಾರೆ. ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು ಸವಾಲುಗಳ ಮಧ್ಯೆ ಈಜುತ್ತಿದ್ದಾರೆ. ಎಲ್ಲವೂ ಸರಿಯಿದ್ದಾಗ ಅಧ್ಯಕ್ಷರಾಗುವುದು ಸುಲಭ, ಆದರೆ ಸವಾಲುಗಳ ನಡುವೆ ಕೆಲಸ ಮಾಡುವುದು ಸುಲಭವಲ್ಲ ಎಂದರು.
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ. ವೆಂಕಟಸಿಂಗ್ ಮಾತನಾಡಿ, ಪತ್ರಿಕಾ ವೃತ್ತಿ ಆಯ್ಕೆ ಮಾಡಿಕೊಂಡು ಬಂದಿದ್ದೇವೆ. ವೃತ್ತಿಯನ್ನು ಕಾಪಾಡಿಕೊಂಡು ಹೋಗಬೇಕಿದೆ. ಆಡಳಿತ, ರಾಜಕೀಯ ರಂಗ ಸೇರಿದಂತೆ ಎಲ್ಲ ರಂಗಗಳು ಕಳಂಕಿತಗೊಂಡಿರುವ ಈಗಿನ ಸಂದರ್ಭದಲ್ಲಿ ಬಹಳ ಜಾಗೃತಿಯಿಂದ ಕೆಲಸ ಮಾಡಬೇಕಿದೆ ಎಂದರು.
ನೈಜ ಪತ್ರಕರ್ತರು ಕಳೆದು ಹೋದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. ಇದರಿಂದ ಸಮಾಜಕ್ಕೆ ಮಾರಕವಾಗಿದೆ. ಪತ್ರಕರ್ತರ ವರದಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಚಿಂತನೆ ಮಾಡಿ ಗಂಭೀರವಾಗಿ ಸಂಘದ ಕೆಲಸ ಪ್ರಮಾಣಿಕವಾಗಿ ಕೆಲಸ ಮಾಡಿದ್ದರಿಂದ ರಾಜ್ಯದಲ್ಲಿ ಪರಿಚಯವಾಗಿ ಸಾಂವಿಧಾನಿಕ ಹುದ್ದೆ ಪಡೆಯಲು ನನ್ನಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಪಿಡಿಎಫ್, ನಕಲಿ ಪತ್ರಕರ್ತರು ಹೆಚ್ಚಾಗುತ್ತಿರುವುದು ಅಪಾಯಕಾರಿ ಸಂಗತಿ ಆಗಿದೆ. ನೈಜ ಪತ್ರಕರ್ತರನ್ನು ಗುರುತಿಸಿ ಚಟುವಟಿಕೆಯಿಂದ ಇರಲು ರಾಜ್ಯ ಸಂಘದಿಂದ ಕಾರ್ಯಕ್ರಮಗಳು ನಡೆಸಬೇಕು. ತನಿಖಾ ಪತ್ರಿಕೋದ್ಯಮಕ್ಕೆ ಮಾಹಿತಿ ಆಯೋಗ ಪ್ರಮುಖ ಅಸ್ತ್ರವಾಗಿದ್ದು, ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಸವಾಲುಗಳ ನಡುವೆ ಈಜಿಕೊಂಡು ಬಂದಿದ್ದು, ಇನ್ನೂ ಈಜುತ್ತಿದ್ದೇನೆ. ಇದಕ್ಕೆ ರಾಜ್ಯಾಧ್ಯಕ್ಷರ ಬೆಂಬಲ ಹಾಗೂ ಸಹಕಾರ ಕಾರಣವಾಗಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಸವಾಲುಗಳ ನಡುವೆ ಈಜಿಕೊಂಡು ಬಂದಿದ್ದು, ಇನ್ನೂ ಈಜುತ್ತಿದ್ದೇನೆ. ಮುಂದೆಯೂ ಕೂಡ ಈಜಿ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲು ಹೋರಾಡುತ್ತೇನೆ ಎಂದರು.
ನನ್ನ ಹೋರಾಟದ ಸ್ಪೂರ್ತಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಸಂಘವನ್ನು ಇನ್ನಷ್ಟು ಬಲಿಷ್ಠಿಗೊಳಿಸುವ ಕೆಲಸ ಮಾಡುತ್ತೇನೆ ಎಂದರು. ಇದೇ ವೇಳೆ ಹಲವಾರು ಪತ್ರಕರ್ತರು ಮತ್ತು ಸಂಘ-ಸಂಸ್ಥೆಗಳ ಮುಖಂಡರು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಸನ್ಮಾನಿಸಿದರು.
ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಹಿರಿಯ ಪತ್ರಕರ್ತರಾದ ಭವಾನಿಸಿಂಗ್ ಠಾಕೂರು, ದೇವಿಂದ್ರಪ್ಪ ಕಪನೂರು ಇದ್ದರು. ಪತ್ರಕರ್ತ ಸಿದ್ಧರಾಜರೆಡ್ಡಿ ನಿರೂಪಿಸಿ, ವಂದಿಸಿದರು.
