ಗುರುಮಠಕಲ್ ಅಲೆಮಾರಿ ಬುಡ್ಗಜಂಗಮ ವಸತಿ ಕುರಿತು ಧ್ವನಿ ಎತ್ತಿದ ಶಾಸಕ ಶರಣಗೌಡ ಕಂದಕೂರ | ಡಿಎಸ್ ಎಸ್ ತಾಲೂಕು ಅಧ್ಯಕ್ಷರಿಂದ ಶಾಸಕರು, ಸರ್ಕಾರಕ್ಕೆ ಅಭಿನಂದನೆ
ಗುರುಮಠಕಲ್: ಪಟ್ಟಣದ ಅಲೆಮಾರಿ ಹಾಗೂ ಬುಡುಗ ಜಂಗಮ ಕುಟುಂಬಗಳ ವಸತಿ ಸಮಸ್ಯೆ ಹಾಗೂ ಇಂದಿರಾನಗರ ಕಾಲೋನಿ ನಿವಾಸಿಗಳ ಮನೆಗಳ ಸಮಸ್ಯೆಯನ್ನು ಕರ್ನಾಟಕ ವಿಧಾನಸಭೆಯ ಸದನದಲ್ಲಿ ಸರ್ಕಾರದ ಗಮನಕ್ಕೆ ತಂದಿರುವ ಶಾಸಕ ಶರಣಗೌಡ ಕಂದಕೂರ ಹಾಗೂ ಈ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಅಭಿನಂದಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆಯೇ ವಸತಿ ಸಮಸ್ಯೆಗಳ ಕುರಿತು ಆ. 29, 2023ರಂದೇ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ನಂತರ ವಿಷಯವನ್ನು ಮಾನ್ಯ ಶಾಸಕರ ಗಮನಕ್ಕೂ ಮೌಖಿಕವಾಗಿ ತರಲಾಗಿತ್ತು.
ಇದೀಗ ಈ ಗಂಭೀರ ಜನಪರ ಸಮಸ್ಯೆಯನ್ನು ವಿಧಾನಸಭೆಯ ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿರುವುದು ಅತ್ಯಂತ ಸಂತೋಷದ ಹಾಗೂ ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಬಡವರು, ವಸತಿ ರಹಿತ ಕುಟುಂಬಗಳು ಹಾಗೂ ಶೋಷಿತ ಸಮುದಾಯಗಳ ಪರವಾಗಿ ಸ್ಪಂದಿಸುತ್ತಿರುವ ಮಾನ್ಯ ಶಾಸಕರ ಜನಪರ ಕಾಳಜಿ ಹಾಗೂ ರಾಜ್ಯ ಸರ್ಕಾರದ ಬದ್ಧತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಅಶೋಕ್ ಎಸ್. ಶ್ಲಾಘಿಸಿದ್ದಾರೆ.
